ಕಾಸರಗೋಡು: ಕಾಡುಕೋಣಗಳು ರಸ್ತೆಗಡ್ಡ ಬಂದ ಹಿನೆಲೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದು ಮಗುಚಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.3೦ರ ವೇಳೆ ಬೋವಿಕ್ಕಾನ- ಕಾನತ್ತೂರು ರಸ್ತೆಯ ಇರಿಯಣ್ಣಿ ಫಾರೆಸ್ಟ್ ಕಚೇರಿ ಸಮೀಪ ಅಪಘಾತ ಸಂಭವಿಸಿದೆ. ಎರಿಂಞಿಪುಳ ನಿವಾಸಿಯ ಕಾರು ಅಪಘಾತಕ್ಕೆ ತುತ್ತಾಗಿತ್ತು.
ಬೋವಿಕ್ಕಾನ ಭಾಗಕ್ಕೆ ಬರುತ್ತಿದ್ದ ಮಧ್ಯೆ ಕಾಡುಕೋಣಗಳು ರಸ್ತೆಗೆ ಅಡ್ಡ ಓಡಿತ್ತೆನ್ನಲಾಗಿದೆ. ಇವುಗಳಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದೆ. ಪೂವಾಳ ರಸ್ತೆಯಲ್ಲಿ ಕಾಡುಕೋಣಗಳ ಉಪಟಳ ತೀವ್ರವೆಂದು ಹೇಳಲಾಗಿದೆ. ನಾಲ್ಕು ಕಾಡುಕೋಣಗಳು ಖಾಯಂ ಆಗಿ ಇಲ್ಲಿ ಇವೆ ಎಂದೂ, ಆದರೆ ಯಾರನ್ನೂ ಕೂಡಾ ಆಕ್ರಮಿಸಿ ರುವುದು ತಿಳಿದು ಬಂದಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.






