ಕಾಸರಗೋಡು: ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ ದ್ವೇಷದಿಂದ ಪತ್ನಿ ಹಾಗೂ ಅತ್ತೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿರಿಸುವ ವೇಳೆ ಅಕಸ್ಮಾತ್ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯ ಗೊಂಡ ಯುವಕ ಸಾವಿಗೀಡಾದ ಘಟನೆ ನಡೆದಿದೆ.
ಕರಿವೆಳ್ಳೂರು ಕೊಳುಮ್ಮಲ್ ವರಿಕ್ಕರ ನಿವಾಸಿಯಾದ ಆಟೋ ರಿಕ್ಷಾ ಚಾಲಕ ಸಿ.ವಿ.ಸನಲ್ ಕುಮಾರ್ (46) ಸಾವನ್ನಪ್ಪಿದ ವ್ಯಕ್ತಿ. ಸನಲ್ ಕುಮಾರ್ ಮತ್ತು ಪತ್ನಿ ಪ್ರಜೀಶರ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿತ್ತೆನ್ನಲಾಗಿದೆ. ಇದರಿಂದ ಪತ್ನಿ ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ್ದರು. ಈ ದ್ವೇಷದಿಂದ ಕಳೆದ ರವಿವಾರ ಸನಲ್ ಕುಮಾರ್ ಕರಿವೆಳ್ಳೂರು ಕೂಕಾನಂ ಶ್ರೀ ಮುತ್ತಪ್ಪನ್ ಕ್ಷೇತ್ರ ಬಳಿಯಿರುವ ಪತ್ನಿ ಪ್ರಜೀಶರ ಮನೆಗೆ ತೆರಳಿ ಪ್ರಜೀಶ ಮತ್ತು ಆಕೆಯ ತಾಯಿ ಪದ್ಮಿನಿ (೫೬)ಯವರ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿರಿಸಿದ್ದನೆಂದು ಆರೋಪಿಸಲಾಗಿದೆ. ಕಿಚ್ಚಿಡುವ ವೇಳೆ ಸನಲ್ ಕುಮಾರ್ ಕೂಡಾ ಗಂಭೀರ ಸುಟ್ಟು ಗಾಯಗೊಂಡಿದ್ದರ. ಕೂಡಲೇ ಅವರು ಹೊರಗೆ ಓಡಿ ಸಮೀಪದ ಹಿತ್ತಿಲೊಂದರಲ್ಲಿ ಕುಸಿದು ಬಿದ್ದಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ಸನಲ್ ಕುಮಾರ್ರನ್ನು ಕಣ್ಣೂರು ವೈದ್ಯಕೀಯ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದ್ದರು. ತಜ್ಞ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸನಲ್ ಕುಮಾರ್ ನಿನ್ನೆ ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಅತ್ತೆಯ ಮೇಲೆ ಕಿಚ್ಚಿರಿಸಿ ಕೊಲೆಗೈಯ್ಯಲೆತ್ನಿಸಿದ ದೂರಿನಂತೆ ಪೊಲೀಸರು ಸನಲ್ ಕುಮಾರ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಸನಲ್ ಕುಮಾರ್ ಕಿಚ್ಚಿರಿಸಿದ ಪರಿಣಾಮ ಸುಟ್ಟು ಗಾಯಗೊಂಡ ಪ್ರಜೀಶ ಮತ್ತು ತಾಯಿ ಪದ್ಮಿನಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ದಿ| ಅಚ್ಯುತನ್- ಸುಶೀಲ ದಂಪತಿಯ ಪುತ್ರನಾದ ಸನಲ್ ಕುಮಾರ್ ಮಕ್ಕಳಾದ ಘನಶ್ಯಾಂ, ನಿತಾಶ, ಸಹೋದರರಾದ ಅನಿಲ್ ಕುಮಾರ್. ಸುನಿಲ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






