ಕಾಸರಗೋಡು: ವಾಹನ ಅಪ ಘಾತದಲ್ಲಿ ಗಾಯಗೊಂಡ ಯುವಕನ ಕೈಯಲ್ಲಿ ಸಿಲುಕಿಕೊಂಡ ಸ್ಟೀಲ್ ಬಳೆಯನ್ನು ಅಗ್ನಿಶಾಮಕದಳ ಮುರಿದು ತೆಗೆದು ಆತನನ್ನು ನೋವಿನಿಂದ ರಕ್ಷಿಸಿದ ಘಟನೆ ನಡೆದಿದೆ.
ಬೈಕ್ ಸವಾರ ಗಣೇಶ್ (38) ಎಂಬವರ ಕೈಗೆ ಸಿಲುಕಿದ್ದ ಸ್ಟೀಲ್ ಬಳೆಯನ್ನು ಮುರಿದು ತೆಗೆಯಲಾಗಿದೆ. ಇವರು ನಿನ್ನೆ ಬೈಕ್ನಲ್ಲಿ ಮೊಗ್ರಾಲ್ ಪುತ್ತೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಚೌಕಿಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾ ಪರಸ್ಪರ ಢಿಕ್ಕಿ ಹೊಡೆದಿತ್ತು. ಇದರಿಂದ ಗಣೇಶ್ರ ಕೈಯ ಎಲುಬು ಮುರಿದು ಹೋಗಿತ್ತು. ಮಾತ್ರವಲ್ಲ ಕೈಯಲ್ಲಿ ಅವರು ಧರಿಸಿದ್ದ ಸ್ಟೀಲ್ ಬಳೆ ತೆಗೆಯಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿತ್ತು. ಅವರನ್ನು ನಂತರ ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಕೈಗೆ ಬಳೆ ಸಿಲುಕಿಕೊಂಡಿರುವುದರಿಂ ದಾಗಿ ಕೈಗೆ ಪ್ಲಾಸ್ಟರ್ ಹಾಕಲು ಸಾಧ್ಯವಾಗದ ಸ್ಥಿತಿ ಉಂಟಾಯಿತು. ಅದರಿಂದಾಗಿ ಗಣೇಶ್ ಕಾಸರಗೋಡು ಅಗ್ನಿಶಾಕದಳವನ್ನು ಸಂಪರ್ಕಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ವಿ. ವೇಣುಗೋಪಾಲನ್ ನೇತೃತ್ವದಲ್ಲಿ ಅಗ್ನಿಶಾಮಕದಳದ ಇತರ ಸಿಬ್ಬಂದಿ ಗಳಾದ ಎಂ. ರಮೇಶ್, ಎಂ.ಎ. ವೈಶಾಖ್, ಕೆ. ವಿ. ಜಿತಿನ್ ಕೃಷ್ಣನ್ ಮತ್ತು ವಿ.ಜಿ. ವಿಜಿತ್ನಾಥ್ ಸೇರಿ ಗಣೇಶ್ರ ಕೈಗೆ ಸಿಲುಕಿದ ಬಳೆಯನ್ನು ಕೊನೆಗೂ ತುಂಡರಿಸಿ ತೆಗೆದರು. ನಂತರ ಗಣೇಶ್ರನ್ನು ಆಸ್ಪತ್ರೆಗೆ ಸಾಗಿಸಿ ಪ್ಲಾಸ್ಟರ್ ಹಾಕಲಾಯಿತು.