ಕಲ್ಲಿಕೋಟೆ: ರೈಲು ಪ್ರಯಾಣ ಮಧ್ಯೆ ಮಾದಕ ಬಿಸ್ಕೆಟ್ ನೀಡಿ ಪ್ರಜ್ಞಾಹೀನ ಗೊಳಿಸಿ ಯುವಕನ ಚಿನ್ನ ಹಾಗೂ ಲ್ಯಾಪ್ಟಾಪ್ ಕಳವು ಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ನಡೆದ 24 ಗಂಟೆಗಳೊಳಗೆ ಕಲ್ಲಿಕೋಟೆಯಿಂದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.
ವಡಗರ ಪುದುಪಣಂ ನಿವಾಸಿ ವಿ.ಪಿ. ಸರೀನ್ರ ಚಿನ್ನ ಹಾಗೂ ಹಣ ಒಳಗೊಂಡ ಬ್ಯಾಗನ್ನು ಕಳವುಗೈಯ್ಯ ಲಾಗಿತ್ತು. ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ರೈಲ್ವೇ ಪೊಲೀಸರು ಹಾಗೂ ಆರ್ಪಿಎಫ್ ಜಂಟಿಯಾಗಿ ಪ್ರತ್ಯೇಕ ತಂಡ ರೂಪೀಕರಿಸಿ ನಡೆಸಿದ ತನಿಖೆಯ ಕೊನೆಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಬಿಹಾರ್ ಆರಾರಿಯ ನಿವಾಸಿಗಳಾದ ಅಬ್ದುಲ್ಲ ರಝಾಕ್ (34), ಮುಹಮ್ಮದ್ ಮಹಮ್ಮೂದ್ ಆಲವ್ (25), ಮುಹಮ್ಮದ್ ಸಫರ್ (40) ಎಂಬಿವರು ಸೆರೆಯಾದವರು. ಆರೋಪಿ ಗಳಿಂದ ಚಿನ್ನ, ನಗದು ಹಾಗೂ ಇತರ ವಸ್ತುಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಲಬಾರ್ ಎಕ್ಸ್ಪ್ರೆಸ್ನ ಎಸ್ ೪ ಕಂಪಾರ್ಟ್ ಮೆಂಟ್ನಲ್ಲಿ ಮಂಗಳೂರಿನಿಂದ ವಡಗರೆಗೆ ತೆರಳುತ್ತಿದ್ದ ಸರೀನ್ಗೆ ಮಾದಕ ಬಿಸ್ಕೆಟ್ ನೀಡಿ ಕಳವು ಗೈಯ್ಯಲಾಗಿದೆ.
ಮಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸರೀನ್ನ ಹತ್ತಿರವೇ ರೈಲಿನಲ್ಲಿ ಕುಳಿತು ಇವರು ಸೌಹಾರ್ದದಿಂದ ವರ್ತಿಸಿದ್ದರು. ಕುಂಬಳೆಗೆ ತಲುಪಿದಾಗ ತಂಡ ಬಿಸ್ಕೆಟ್ ನೀಡಿದ್ದು, ಅದನ್ನು ಸೇವಿಸಿರುವುದ ರೊಂದಿಗೆ ಸರೀನ್ ನಿದ್ದೆಗೆ ಜಾರಿದ್ದಾರೆ. ಈ ಹಿನ್ನೆಲೆಯಲ್ಲಿ ವಡಗರದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ರೈಲು ಫರೋಕ್ಗೆ ತಲುಪಿದಾಗ ಸೀಟ್ ಬುಕ್ ಮಾಡಿದ ಇನ್ನೋರ್ವ ವ್ಯಕ್ತಿ ರೈಲಿಗೆ ಹತ್ತಿದ್ದು, ಅಲ್ಲಿ ಸರೀನ್ನನ್ನು ಇಳಿಸಿದ್ದಾರೆ. ಆದರೆ ಬ್ಯಾಗ್ ಹಾಗೂ ಇತರ ವಸ್ತುಗಳು ನಾಪತ್ತೆಯಾಗಿದ್ದ ಬಗ್ಗೆ ಪೊಲೀಸರಿಗೆ ಸರೀನ್ ದೂರು ನೀಡಿದ್ದಾರೆ. ಬಳಿಕ ಇನ್ನೊಂದು ರೈಲಿನಲ್ಲಿ ತಿರೂರಿಗೆ ತಲುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬಳಿಕ ಕಲ್ಲಿಕೋಟೆ ಮೆಡಿಕಲ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದು, ಈ ಮಧ್ಯೆ ಪೊಲೀಸರು ತನಿಖೆ ಆರಂಭಿಸಿದ್ದರು.







