ಕುಡಿಯುವ ನೀರು, ವಸತಿ ಸಮಸ್ಯೆಗೆ ಆದ್ಯತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ. ಮೀಸಲಿಟ್ಟ ಬದಿಯಡ್ಕ ಪಂ. ಬಜೆಟ್
ಬದಿಯಡ್ಕ: ಪಂಚಾಯತ್ನ ೨೦೨೪-೨೫ನೇ ಆರ್ಥಿಕ ವರ್ಷದ ಬಜೆಟ್ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್ ಮಂಡಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರ, ವಸತಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವ ೨೫,೩೮,೬೯,೭೨೫ ರೂ. ಆದಾಯ, ೨೫,೩೨,೧೯,೭೨೫ ರೂ. ವೆಚ್ಚದ ೩೮,೬೫,೦೮೧ ರೂ. ಮೀಸಲು ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಕಡು ಬಡತನ ಯಾದಿಯಲ್ಲಿರುವ ಎಲ್ಲಾ ವಸತಿ ರಹಿತರಿಗೂ ಮನೆ ನೀಡುವುದಕ್ಕೆ ಮೊತ್ತ ಮೀಸಲಿಡಲಾಗಿದೆ. ಬದಿಯಡ್ಕ ಪಂ. ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ., ಬೋಳುಕಟ್ಟೆ ಇಂಡೋರ್ ಸ್ಟೇಡಿಯಂ ದುರಸ್ತಿಗಾಗಿ ೧೦ ಲಕ್ಷ ರೂ, ವಸತಿ ನಿರ್ಮಾಣ ಯೋಜನೆಗಳಿಗಾಗಿ ೯ ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ವಲಯ, ತ್ಯಾಜ್ಯ ನಿರ್ಮೂಲನೆ ಚಟುವಟಿಕೆಗಳಿಗೆ ಬಜೆಟ್ನಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಹೊಸ ಮಾದರಿಯ ಎಂ.ಸಿ.ಎಫ್. ನಿರ್ಮಿಸಲು, ಮನೆಗಳಿಗೆ ತ್ಯಾಜ್ಯ ಸಂಸ್ಕರಣೆ ಕಾರ್ಯಗಳಿಗೆ ಮೊತ್ತ ಮೀಸಲಿಡಲಾಗಿದೆ. ಆರೋಗ್ಯ ಉಪಕೇಂದ್ರಗಳ ನಿರ್ಮಾಣಕ್ಕಾಗಿ ೨೮ ಲಕ್ಷ ರೂ., ಬದಿಯಡ್ಕ ಕಮ್ಯುನಿಟಿ ಹೆಲ್ತ್ ಸೆಂಟರ್ಗೆ ಬಯೋ ಕೆಮಿಸ್ಟ್ರಿ ಅನಲೈಸರ್ ಖರೀದಿಗೆ ೧೨ ಲಕ್ಷ ರೂ. ಮೀಸಲಿಡಲಾಗಿದೆ. ರಸ್ತೆ ಸಂಬಂಧ ಅಭಿವೃದ್ಧಿಗೆ ೨,೪೧,೫೦,೦೦೦ ರೂ. ಬಜೆಟ್ನಲ್ಲಿ ಮೀಸಲಿಡಲಾಗಿದೆ.