ಢಿಕ್ಕಿ ಹೊಡೆದ ಕಾರುಗಳಿಗೆ ಬಡಿದು ಮಗುಚಿದ ಆಂಬುಲೆನ್ಸ್: ಗೃಹಿಣಿ ಮೃತ್ಯು

ಉಪ್ಪಳ: ಢಿಕ್ಕಿ ಹೊಡೆದು ನಿಂತ ಕಾರುಗಳಿಗೆ ಆಂಬುಲೆನ್ಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗೃಹಿಣಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ 4.30ರ ವೇಳೆ ಈ ಅಪಘಾತ ಉಂಟಾಗಿದೆ. ಆಂಬುಲೆನ್ಸ್‌ನಲ್ಲಿದ್ದ ಕಣ್ಣೂರು ವಾರಂ ನಿವಾಸಿ  ಶಾಹಿನ (48) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಅವರ ಜೊತೆಗಿದ್ದ ನಾಲ್ಕು ಮಂದಿ  ಗಾಯಗೊಂಡಿದ್ದಾರೆ. ಮೃತಪಟ್ಟ ಶಾಹಿನರ ಪುತ್ರಿ ರಿಯಾ ಫಾತಿಮ (9)ಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕೊಂಡೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಢಿಕ್ಕಿ ಹೊಡೆದಿದ್ದವು.  ಅದರ ಬೆನ್ನಲ್ಲೇ ಒಂದು ಕಾರಿಗೆ ಆಂಬುಲೆನ್ಸ್ ಢಿಕ್ಕಿ ಹೊಡೆದು  ಮಗುಚಿ ಬಿದ್ದಿದೆ. ಈ ವೇಳೆ ಶಾಹಿನ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಪಘಾತದಲ್ಲಿ ಶಾಹಿನರ ಪುತ್ರಿ ರಿಯಾ ಫಾತಿಮ, ಸಹೋದರಿ ಶಾಜಿನ (45), ಅಸೀವ್ (22), ಆಂಬುಲೆನ್ಸ್ ಚಾಲಕ ಅಕ್ರಂ ಎಂಬಿವರು ಗಾಯಗೊಂಡಿದ್ದಾರೆ. 

You cannot copy contents of this page