ಧರ್ಮನಗರದಲ್ಲಿ ಕುಸಿದ ಮೇಲ್ಛಾವಣಿ: ತಪ್ಪಿದ ದುರಂತ

ವರ್ಕಾಡಿ: ನಿನ್ನೆ ರಾತ್ರಿ ಸುರಿದ ಮಳೆ, ಗಾಳಿಗೆ ಮನೆಯೊಂದು ಕುಸಿದು ಬಿದ್ದು ಕುಟುಂಬ ಅದೃಷ್ಟವಶಾತ್ ಪಾರಾದ ಘಟನೆ ಮಜೀರ್‌ಪಳ್ಳ ಧರ್ಮನಗರದಲ್ಲಿ ಸಂಭವಿಸಿದೆ. ರಾತ್ರಿ ಸುಮಾರು 11 ಗಂಟೆ ವೇಳೆ ಮನೆಯ ಪಕ್ಕಾಸು ಒಂದು ಮುರಿದು ಬಿದ್ದಿದೆ. ಇದನ್ನು ಕಂಡ ಮನೆ ಮಾಲಕ, ಕೂಲಿ ಕಾರ್ಮಿಕ ಅಬ್ದುಲ್ ಖಾದರ್ ಮನೆಯಲ್ಲಿದ್ದವರನ್ನೆಲ್ಲಾ ಬಾಯಿಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋದರು. ಒಟ್ಟು 7 ಮಂದಿ ಈ ಮನೆಯಲ್ಲಿ ವಾಸವಾಗಿದ್ದರು. ಅವರನ್ನೆಲ್ಲಾ ಸಂಬಂಧಿಕರ ಮನೆಗೆ ಕರೆದುಕೊಂಡು ಹೋದ ಬಳಿಕ ಹಿಂತಿರುಗಿ ತನ್ನ ಸ್ವಂತ ಮನೆಗೆ ಅಬ್ದುಲ್ ಖಾದರ್ ಬಂದಾಗ ಮನೆಯ ಛಾವಣಿ ಸಂಪೂರ್ಣ ಕುಸಿದಿದೆ. ಹೆಂಚು ಹಾಕಿದ ಹಳೆಯ ಮನೆ ಇದಾಗಿದ್ದು, ಮನೆ ಮಂದಿ ನಿದ್ರಿಸಿದ್ದ ವೇಳೆ ಛಾವಣಿ ಕುಸಿದಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತೆನ್ನಲಾಗಿದೆ. ಆದರೆ ಅಬ್ದುಲ್ ಖಾದರ್‌ರ ಸಮಯೋಜಿತ ನಡೆಯಿಂದಾಗಿ ಅಪಾಯ ತಪ್ಪಿದೆ. ಕೂಲಿ ಕಾರ್ಮಿಕರಾಗಿರುವ ಇವರ ಮನೆ ಸಹಿತ ಗೃಹೋಪಕರಣಗಳೆಲ್ಲಾ ನಾಶವಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

You cannot copy contents of this page