ಪತ್ನಿಯನ್ನು ಬಿಟ್ಟು ಇನ್ನೋರ್ವೆಯೊಂದಿಗೆ ತೆರಳಿದ ಯುವಕಪ್ರಶ್ನಿಸಿದ ಸಂಬಂಧಿಕರನ್ನು ಕೊಲೆಗೈಯ್ಯಲು ಯತ್ನ; ಆರೋಪಿ ಸೆರೆ
ಕಣ್ಣೂರು: ಪತ್ನಿಯನ್ನು ಬಿಟ್ಟು ಯುವಕ ಇನ್ನೋರ್ವೆ ಯುವತಿ ಯೊಂದಿಗೆ ಪರಾರಿಯಾಗಿದ್ದಾನೆ. ವಾಪಸು ಬಂದ ಬಳಿಕ ಈ ಬಗ್ಗೆ ಪ್ರಶ್ನಿಸಿದ ವಿರೋಧದಿಂದ ಸಂಬಂಧಿಕನಾದ ಯುವಕನನ್ನು ವಾಹನ ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಶ್ರೀಕಂಠಪುರಂ, ಕಮುಕರಕಂಡಿ ಪುದಿಯಪುರಯಿಲ್ ಕೆ.ಪಿ. ನವಾಜ್ (32)ನನ್ನು ಶ್ರೀಕಂಠಾಪುರ ಪೊಲೀಸ್ ಇನ್ಸ್ಪೆಕ್ಟರ್ ಟಿ.ಕೆ. ಮುಕುಂದನ್ ಹಾಗೂ ತಂಡ ಸೆರೆ ಹಿಡಿದಿದೆ. ನವಾಜ್ ಮೀನು ಮಾರಾಟಗಾರ ನಾಗಿದ್ದಾನೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ. ಎಳ್ಳರಂಞಿ ಕೆ.ಪಿ. ಮಹರೂಫ್ (38)ನನ್ನು ಕೊಲೆಗೈಯ್ಯಲು ಯತ್ನಿಸಿರುವುದಾಗಿ ದೂರು ದಾಖಲಾಗಿದೆ. ಮಹರೂಫ್ರ ಚಿಕ್ಕಮ್ಮನ ಮಗಳಾಗಿದ್ದಾಳೆ ನವಾಜ್ನ ಪತ್ನಿ. ಈ ಸಂಬಂಧ ಇರುವಂತೆಯೇ ನವಾಜ್ ಇನ್ನೋರ್ವೆ ಯುವತಿಯ ಜೊತೆ ಪರಾರಿಯಾಗಿದ್ದನು. ಈ ಬಗ್ಗೆ ದೂರು ನೀಡಿದ್ದು, ನವಾಜ್ ಹಾಗೂ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರನ್ನು ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ತಿಳಿಸಿತ್ತು. ಬಳಿಕ ಯುವತಿಯನ್ನು ನವಾಜ್ ಆಕೆಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನು. ಮರುದಿನ ಪತ್ನಿ ಮನೆಗೆ ಬಂದಾಗ ಮಹರೂಫ್ ಆತನನ್ನು ಪ್ರಶ್ನಿಸಿದ್ದರು. ಇದರಿಂದ ರೋಷಗೊಂಡ ನವಾಜ್ ಎಲ್ಲರನ್ನೂ ವಾಹನ ಢಿಕ್ಕಿ ಹೊಡೆಸಿ ಕೊಲ್ಲುವುದಾಗಿ ಬೆದರಿಸಿದ್ದನು. ಆ ಬಳಿಕ ಮಹರೂಫ್ನ ಆಟೋ ಟೆಂಪೋಗೆ ವಾಹನ ಢಿಕ್ಕಿ ಹೊಡೆಸಿದ್ದಾನೆ. ಅಪಘಾತದಿಂದ ಮಹರೂಫ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.