ಬುಡಕಟ್ಟು ಜನಾಂಗಕ್ಕೆ ಸೇರಿದ ಯುವತಿಯ ನಿಗೂಢ ಸಾವು: ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ವಜಾ
ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿಯ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಯನ್ನು ಮಂಪರು ಪರೀಕ್ಷೆಗೊಳಪಡಿಸ ಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ವಜಾ ಗೈದಿದೆ.
ಈ ಪ್ರಕರಣದ ಆರೋಪಿ ಪಾಣ ತ್ತೂರು ನಿವಾಸಿ ಬಿಜು ಪೌಲೋಸ್ ಮಂಪರು ಪರೀಕ್ಷೆಗೊಳಗಾಗಲು ಅಸಮ್ಮತಿಸಿದ್ದನು. ಆ ಕಾರಣದಿಂದ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಗೈದಿದೆ. ಆತನನ್ನು ಮಂಪರು ಪರೀಕ್ಷೆಗೊಳಪಡಿಸಬೇಕೆಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಮುಂದಿರಿಸಲಾದ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿದೆ. ಅಂಬಲ ತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿ ೧೫ ವರ್ಷಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿ ದ್ದಳು. ಇದಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ರಾಜ್ಯ ಪೊಲೀಸ್ ಮಹಾ ನಿರ್ದೇಶರು ರಚಿಸಿದ ವಿಶೇಷ ಪೊಲೀಸರ ತಂಡ ಆರೋಪಿ ಬಿಜುವನ್ನು ಕಳೆದ ತಿಂಗಳು ಕರ್ನಾಟಕದಿಂದ ಬಂಧಿಸಿತ್ತು.
ಕ್ರೈಂಬ್ರಾಂಚ್ ಐಜಿ ಪಿ. ಪ್ರಕಾಶ್ರ ನೇತೃತ್ವದ ತಂಡ ಆತನನ್ನು ಬಂಧಿಸಿದೆ. ನಾಪತ್ತೆಯಾಗಿದ್ದ ಯುವತಿಯ ಅಸ್ತಿ ಪಂಜರವನ್ನು ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಪೊಲೀಸರು ಪತ್ತೆಹಚ್ಚಿದ್ದರು. ಅದನ್ನು ಡಿಎನ್ಎ ಪರೀಕ್ಷೆಗೊಳಪಡಿಸಿದಾಗ ಅದು ನಾಪತ್ತೆಯಾದ ಯುವತಿಯ ದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದರು. ನಾಪತ್ತೆಯಾದ ಯುವತಿಯನ್ನು ಕೊಂದು ಮೃತದೇಹವನ್ನು ಹೊಳೆಗೆಸೆ ದಿದ್ದೆನೆಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದನು. ಆದ್ದರಿಂದ ಈ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆತನನ್ನು ಮಂಪರು ಪರೀಕ್ಷೆಗೊಳಪಡಿಸಲು ಅನುಮತಿ ನೀಡಬೇಕೆಂದು ಕೋರಿ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಮಂಪರು ಪರೀಕ್ಷೆಗೊಳಪಡಿಸಲು ಆರೋಪಿ ಸಮ್ಮತಿಸಿರಲಿಲ್ಲ. ಆ ಕಾರಣದಿಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್ನ ಮೇಲ್ನೋಟದಲ್ಲಿ ಕ್ರೈಮ್ ಬ್ರಾಂಚ್ ವಿಭಾಗ ಪ್ರಕರಣದ ತನಿಖೆ ನಡೆಸುತ್ತಿದೆ.