ಬೇಕಲಕೋಟೆಗೆ ತಲುಪಿದ ಯುವಕ, ಪ್ರಿಯತಮೆಗೆ ತಂಡದಿಂದ ಹಲ್ಲೆ: ಬ್ರೆಸ್‌ಲೆಟ್, 5000 ರೂ. ಅಪಹರಣ; ಮೂವರ ಬಂಧನ

ಕಾಸರಗೋಡು: ಬೇಕಲ ಕೋಟೆಗೆ ತಲುಪಿದ ಯುವಕ ಹಾಗೂ ಪ್ರಿಯತಮೆಗೆ ತಂಡವೊಂದು ಹಲ್ಲೆಗೈದು ಬ್ರೆಸ್‌ಲೆಟ್ ಹಾಗೂ 5000 ರೂಪಾಯಿ ಅಪಹರಿಸಿರುವುದಾಗಿ ದೂರಲಾಗಿದೆ. ಕಾರಡ್ಕ ನಾರಂಪಾಡಿಯ 19ರ ಹರೆಯದ ಯುವಕ ಹಾಗೂ ಆತನ ಪ್ರಿಯತಮೆಗೆ ನಾಲ್ಕು ಮಂದಿಯ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಈ ಯುವಕ ಹಾಗೂ ಪ್ರಿಯತಮೆ  ನಿನ್ನೆ ಅಪರಾಹ್ನ 3.30ರ ವೇಳ ಬೇಕಲಕೋಟೆಗೆ ತಲುಪಿದ್ದರು. ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ  ನಿಲ್ಲಿಸಿ  ಹೊರಗೆ ಬರುತ್ತಿದ್ದಂತೆ ಅಲ್ಲಿಗೆ ತಲುವಿದ ನಾಲ್ಕು ಮಂದಿ ತಂಡ ಅವರನ್ನು ಪ್ರಶ್ನಿಸಿ ಹಲ್ಲೆಗೈದಿದೆ. ಈ ಬಗ್ಗೆ ಯುವಕ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆ ವೇಳೆ ಮೂರು ಮಂದಿಯನ್ನು ಬಂಧಿಸಲಾಗಿದೆ.  ಪಳ್ಳಿಕ್ಕೆರೆಯ ಅಬ್ದುಲ್ ವಾಹಿದ್ (25), ಬೇಕಲ ಹದ್ದಾದ್‌ನಗರದ ಅಹಮ್ಮದ್ ಕಬೀರ್ (26), ಮವ್ವಲ್ ಕಾಲನಿಯ ಶ್ರೀಜಿತ್ (26) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.  ಸಾದಿಕ್ ಎಂಬ ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ  ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. 

You cannot copy contents of this page