ಮಂಜೇಶ್ವರ: ಮೀಂಜ ಪಂಚಾ ಯತ್ನ ಮಜಿಬೈಲು ಪ್ರದೇಶದಲ್ಲಿ ವ್ಯಾಪಕ ಮಳೆಗೆ ತೋಡಿನ ಕಟ್ಟ ಒಡೆದು ಪ್ರವಾಹೋಪಾದಿಯಲ್ಲಿ ನೀರು ಹರಿದ ಹಿನ್ನೆಲೆಯಲ್ಲಿ ಅಪಾರ ನಾಶನಷ್ಟದ ಜೊತೆಗೆ ಹಲವಾರು ವಾಹನಗಳು ಕೂಡಾ ನೀರಿಗೆ ಕೊಚ್ಚಿ ಹೋಗಿದೆ. ಸುಮಾರು ೭೫ ಹೆಕ್ಟೆರ್ ಭತ್ತ ಕೃಷಿಗೆ ನೀರು ಹರಿದು ನಾಶವಾಗಿದ್ದು, ಈ ಪ್ರದೇಶದ ೧೫೦ರಷ್ಟು ಕುಟುಂಬಗಳು ಸಂಚರಿಸುತ್ತಿದ್ದ ದಾರಿ ಕೂಡಾ ನೀರುಪಾಲಾಗಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ತೋಡಿಗೆ ಕಟ್ಟ ಕಟ್ಟಿ ನೀರ ಹರಿವನ್ನು ತಡೆಯಲು ಸ್ಥಳೀಯರು ಮುಂದಾಗಿದ್ದು, ಈಗಾಗಲೇ ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಕಟ್ಟ ನಿರ್ಮಿಸಿ ದ್ದಾರೆ. ಗ್ರಾಮಸ್ಥರಿಂದ ಸಂಗ್ರಹಿಸಿದ ಹಣ, ಸಾಮಗ್ರಿಗಳನ್ನು ಉಪಯೋಗಿಸಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗಿದೆ.
ಇಲ್ಲಿ ಶಾಶ್ವತ ಪರಿಹಾರ ಅಗತ್ಯವಿದ್ದು, ಸರಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಭತ್ತ ಕೃಷಿ ಕೈಗೊಂಡ ಸ್ಥಳದಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು ಕೃಷಿ ಇಲಾಖೆಯು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳಕ್ಕೆ ಭೇಟಿ ನೀಡಿದ ಸಿಪಿಎಂ ಹಿರಿಯ ಮುಖಂಡ ಜಯಾನಂದ, ಸಿಪಿಐಯ ಜಯರಾಮ್ ಬಲ್ಲಂಗುಡೇಲು ತಿಳಿಸಿದ್ದಾರೆ. ಮುಂದೆ ಈ ರೀತಿಯ ದುರಂತಗಳು ಸಂಭವಿಸದಿರಲು ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆಗಳನ್ನು ನಿರ್ಮಿಸಬೇಕು, ಕೃಷಿಕರಿಗೆ ಉಂಟಾದ ನಷ್ಟವನ್ನು ಸರಿದೂಗಿಸಲು ಸಹಾಯಧನ, ಕೃಷಿ ಸಾಧನಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.