ಮಸೀದಿಗಳ ಕಾಣಿಕೆ ಡಬ್ಬಿಯಿಂದ ಹಣ ಕಳವುಗೈದ ಆರೋಪಿ ಸೆರೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿರುವ ಮಸೀದಿಗಳ ಕಾಣಿಕೆ ಡಬ್ಬಿಗಳಿಂದ ಹಣ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಪುತ್ತೂರು ತಾರಿಗುಡ್ಡೆ ನಿವಾಸಿ ಅಬೂಬಕರ್ (೫೦) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಪೆರ್ಲ, ಪಳ್ಳತ್ತಡ್ಕ, ನೀರ್ಚಾಲು ಎಂಬಿಡೆಗಳಲ್ಲಿರುವ ಮಸೀದಿಗಳ ಕಾಣಿಕೆ ಹುಂಡಿಯಿಂದ ಹಣ ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಜನವರಿ ೩೧ರಂದು ರಾತ್ರಿ  ಈ ಮೂರು ಮಸೀದಿಗಳ ಕಾಣಿಕೆ ಡಬ್ಬಿಯಿಂದ ಹಣ ಕಳವಿಗೀಡಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ.  ಕಳವು ನಡೆದ ಸ್ಥಳಗಳ ಪರಿಸರದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿ ಸಂಚರಿಸಿದ ಬೈಕ್‌ನ ನಂಬ್ರ ಲಭಿಸಿದೆ. ಅದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಇದರಂತೆ ಬದಿಯಡ್ಕ ಎಸ್‌ಐ ಅನೂಪ್ ನೇತೃತ್ವದ ಪೊಲೀಸರು ಪುತ್ತೂರಿಗೆ ತೆರಳಿ ಆರೋಪಿಯನ್ನು  ಕಸ್ಟಡಿಗೆ ತೆಗೆದಿದ್ದಾರೆ. ಅನಂತರ ಕಳವು ನಡೆದ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಿದ ಬಳಿಕ ಆತನ ಬಂಧನ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page