ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸಿಪಿಎಂ ನೇತಾರನ ಕೊಲೆ
ಕಲ್ಲಿಕೋಟೆ: ಕ್ಷೇತ್ರೋತ್ಸವದಂಗ ವಾಗಿ ಏರ್ಪಡಿಸಲಾಗಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಕ್ರಮಿಯೋರ್ವ ಸಿಪಿಎಂ ನೇತಾರ ರನ್ನು ಇರಿದು ಕೊಲೆಗೈದ ಘಟನೆ ಕಲ್ಲಿಕೋಟೆ ಜಿಲ್ಲೆಯ ಕೊಲಾಂಡಿಯಲ್ಲಿ ನಡೆದಿದೆ.
ಸಿಪಿಎಂನ ಕೊಲಾಂಡಿ ಸೆಂಟ್ರಲ್ ಲೋಕಲ್ ಸಮಿತಿ ಕಾರ್ಯದರ್ಶಿ ಪೆರುವಟ್ಟೂರು ಪುಳಿಯೋರವಯಲ್ ಪಿ.ಎ. ಸತ್ಯನಾಥನ್ (೬೬) ಕೊಲೆಗೀ ಡಾದ ನೇತಾರ. ಕೊಲಾಂಡಿ ಪೆರು ವಟ್ಟೂರು ಮುತ್ತಾಂಬಿ ಚೆರಿಯಪ್ಪುರಂ ಪರದೇವತಾ ಪೆರಿಲ್ಲಾತ್ತನ್ ದೇವಸ್ಥಾನದ ಉತ್ಸವದಂಗವಾಗಿ ಅಲ್ಲಿ ನಿನ್ನೆ ರಾತ್ರಿ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸತ್ಯನಾಥನ್ ಕೂಡಾ ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುತ್ತಿರುವಂತೆಯೇ ಅಲ್ಲಿಗೆ ನುಗ್ಗಿ ಬಂದ ಅಕ್ರಮಿ ಸತ್ಯನಾಥನ್ರಿಗೆ ಚಾಕು ವಿನಿಂದ ಇರಿದಿದ್ದಾನೆ. ಗಂಭೀರಗಾಯ ಗೊಂಡ ಸತ್ಯನಾಥನ್ರನ್ನು ತಕ್ಷಣ ಅಲ್ಲಿನ ತಾಲೂಕು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಸತ್ಯನಾಥನ್ರನ್ನು ಇರಿದ ಬಳಿಕ ಆರೋಪಿ ಕೊಲಾಂಡಿ ಪರುವಟ್ಟೂರು ಪುರತ್ತಾನ್ದ ಅಭಿಲಾಷ್ (೩೩) ಪೊಲೀಸರ ಮುಂದೆ ಶರಣಾಗಿದ್ದಾನೆ. ನಂತರ ಪೊಲೀಸರು ಆತನ ಬಂಧನ ದಾಖಲಿಸಿಕೊಂಡಿದ್ದಾರೆ. ಅಭಿಲಾಷ್ ಈ ಹಿಂದೆ ಸಿಪಿಎಂ ಕಾರ್ಯಕರ್ತ ನಾಗಿದ್ದನು. ವೈಯಕ್ತಿಕ ಹಗೆತನವೇ ಕೊಲೆಗೆ ಕಾರಣವಾಗಿದೆಯೆಂದು ಪ್ರಾಥಮಿಕ ತನಿಖೆ ಸೂಚಿಸುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಸತ್ಯನಾಥನ್ರ ಕೊಲೆಯನ್ನು ಪ್ರತಿಭಟಿಸಿ ಸಿಪಿಎಂ ನೀಡಿದ ಕರೆಯಂತೆ ಕೊಲಾಂಡಿಯಲ್ಲಿ ಇಂದು ಹರತಾಳ ಆಚರಿಸಲಾಗುತ್ತಿದೆ. ಕೊಲೆ ಹಿಂದೆ ರಾಜಕೀಯ ಆರೋಪವನ್ನು ಸಿಪಿಎಂ ಈತನಕ ಹೊರಿಸಿಲ್ಲ. ಕೊಲೆ ಬಗ್ಗೆ ಸದ್ಯ ಏನೂ ಹೇಳುವಂತಿಲ್ಲ. ಇದರಲ್ಲಿ ರಾಜಕೀಯ ಅಥವಾ ಇತರ ಯಾವುದೇ ಕಾರಣ ಅಡಗಿದೆಯೇ ಎಂಬುವುದನ್ನು ಪರಿಶೀಲಿಸಲಾಗು ತ್ತಿದೆ. ಆ ಬಳಿಕವಷ್ಟೇ ಈ ವಿಷಯದಲ್ಲಿ ಏನಾದರೂ ಹೇಳಲು ಸಾಧ್ಯವೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ. ಮೋಹನ್ ಹೇಳಿದ್ದಾರೆ.
ಸತ್ಯನಾಥನ್ರ ಮೃತದೇಹವನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಕೊಲೆ ಹಿನ್ನೆಲೆಯಲ್ಲಿ ಕೊಲಾಂಡಿ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ದಿ| ಅಪ್ಪು ನಾಯರ್-ಕಮಲಾಕ್ಷಿ ದಂಪತಿಯ ಪುತ್ರನಾಗಿರುವ ಸತ್ಯನಾಥನ್ ಪತ್ನಿ ಲತಿಕ, ಮಕ್ಕಳಾದ ಸಲೀಲ್ನಾಥ್, ಸಲೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಆರೋಪಿ ಅಭಿಲಾಷ್ ನಗರಸಭೆ ವಾಹನದ ತಾತ್ಕಾಲಿಕ ಚಾಲಕ ನಾಗಿದ್ದಾರೆ. ಆತ ಈ ಹಿಂದೆ ಸಿಪಿಎಂ ಕಾರ್ಯಕರ್ತನಾಗಿದ್ದ್ದ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಈತನನ್ನು ಬಳಿಕ ಪಕ್ಷದಿಂದ ವಜಾಗೈಯ್ಯಲಾಗಿತ್ತೆಂದು ಸಿಪಿಎಂ ನೇತಾರರು ಹೇಳಿದ್ದಾರೆ.