ಉಪ್ಪಳದಲ್ಲಿ ಮತ್ತೊಂದು ಮನೆಯಿಂದ ನಗ-ನಗದು ಕಳವು
ಉಪ್ಪಳ: ಉಪ್ಪಳದಲ್ಲಿ ಮತ್ತೊಂದು ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವು ನಡೆದಿದೆ.
ಉಪ್ಪಳ ಪತ್ಪಾಡಿ ರಸ್ತೆಯಲ್ಲಿರುವ ಮೊಹಮ್ಮದಲಿ ಸ್ಟ್ರೀಟ್ ನ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮನೆಯಿಂದ ೫ ಪವನ್ ಚಿನ್ನಾಭರಣ ಹಾಗೂ ೩೦ ಸಾವಿರ ರೂಪಾಯಿ ಗಳನ್ನು ಕಳ್ಳರು ದೋಚಿದ್ದಾರೆ. ಅಬ್ದುಲ್ ರಜಾಕ್ ಕುಟುಂಬ ಸಮೇತ ಈ ತಿಂಗಳ ೧೮ರಂದು ಗಲ್ಫ್ಗೆ ತೆರಳಿದ್ದಾರೆ. ಇದರಿಂದ ಈ ಮನೆಯಲ್ಲಿ ಯಾರೂ ಇರಲಿಲ್ಲ. ಸ್ಥಳೀಯ ನಿವಾಸಿಯಾದ ಯೂಸಫ್ ಸಲೀಂ ಎಂಬವರು ನಿನ್ನೆ ಬೆಳಿಗ್ಗೆ ಈ ಮನೆಯತ್ತ ತೆರಳಿದಾಗ ಹಿಂಬಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ತಲುಪಿ ಮನೆಯೊಳಗೆ ಪರಿಶೀಲಿಸಿದಾಗ ಕಪಾಟು ತೆರೆದಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಕಪಾಟಿನಲ್ಲಿದ್ದ ಹಣ ಹಾಗೂ ಚಿನಾಭರಣಗಳನ್ನು ಕಳ್ಳರು ದೋಚಿರುವುದಾಗಿ ತಿಳಿದುಬಂದಿದೆ. ಇಂದು ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉಪ್ಪಳ ಮಜಲ್ನಲ್ಲೂ ಮೊಹಮ್ಮದ್ ರಫೀಕ್ ಎಂಬವರ ಮನೆಯೊಂದ ರಿಂದ ೭ ಪವನ್ ಚಿನ್ನಾಬರಣ ಹಾಗೂ ೬೦ ಸಾವಿರ ರೂಪಾಯಿ ಹಣ ಕಳ್ಳರು ದೋಚಿದ್ದಾರೆ. ಮೊಹಮ್ಮದ್ ರಫೀಕ್ ಹಾಗೂ ಕುಟುಂಬ ಉಮ್ರಕ್ಕೆ ತೆರಳಿದಾಗ ಮನೆ ಗೆ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ. ಆದರೆ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.