ಕರಂದಕ್ಕಾಡ್-ರೈಲು ನಿಲ್ದಾಣ ರಸ್ತೆ ನವೀಕರಿಸಿದ ಕಾಮಗಾರಿಯಲ್ಲಿ ಅವ್ಯವಹಾರ ಪತ್ತೆ ಮಾಡಬೇಕು, ನಗರದ ರಸ್ತೆಗಳನ್ನು ದುರಸ್ತಿಗೊಳಿಸಬೇಕು-ಬಿಎಂಎಸ್
ಕಾಸರಗೋಡು: ನಗರದ ಪ್ರಧಾನ ರಸ್ತೆಯಾದ ಕರಂದಕ್ಕಾಡ್- ರೈಲ್ವೇ ನಿಲ್ದಾಣ ರಸ್ತೆ ನವೀಕರಿಸಿ ಕೆಲವೇ ದಿನಗಳೊಳಗೆ ಹಾನಿಗೊಂಡಿರುವುದರಲ್ಲಿ ಭ್ರಷ್ಟಾಚಾರವನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾಸರಗೋಡು ನಗರದ ಶೋಚನೀಯಗೊಂಡ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಯೋಗ್ಯಗೊಳಿ ಸಬೇಕು, ನಗರದಲ್ಲಿ ಉಂಟಾಗುತ್ತಿ ರುವ ಟ್ರಾಫಿಕ್ ಬ್ಲೋಕ್ ಪರಿಹರಿಸಬೇಕು, ಚರಂಡಿಗಳನ್ನು ಪುನರ್ ನಿರ್ಮಿಸಬೇಕು, ಹೊಸ ಬಸ್ ನಿಲ್ದಾಣದಲ್ಲಿ ಕಟ್ಟಿ ನಿಲ್ಲುವ ಮಲಿನ ಜಲವನ್ನು ತೆರವುಗೊಳಿಸಲಿರುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನಗರಸಭಾ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು.
ಆಟೋರಿಕ್ಷಾ ಮಜ್ದೂರ್ ಸಂಘ್ ಜಿಲ್ಲಾ ಉಪಾಧ್ಯಕ್ಷ ಕುಂಞಿಕಣ್ಣನ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಮಾರ್ಚ್ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎ. ಕೇಶವ, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಶುಭ ಕೋರಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಗುರುದಾಸ್ ಮಧೂರು, ಹರೀಶ್ ಕುದ್ರೆಪ್ಪಾಡಿ, ಉದುಮ ವಲಯ ಕಾರ್ಯದರ್ಶಿ ಭಾಸ್ಕರನ್ ಪೊಯಿನಾಚಿ, ಚೆಂಗಳ ಪಂ. ಸಮಿತಿ ಕಾರ್ಯದರ್ಶಿ ರಂಜಿತ್ ಚೆರ್ಕಳ, ಆಟೋರಿಕ್ಷಾ ಮಜ್ದೂರ್ ಸಂಘ್ ಕಾಸರಗೋಡು ವಲಯ ಅಧ್ಯಕ್ಷ ಎಸ್.ಕೆ. ಉಮೇಶ್ ಮಾತನಾಡಿದರು. ಬಾಬುಮೋನ್ ಚೆಂಗಳ ಸ್ವಾಗತಿಸಿ, ಬಿಎಂಎಸ್ ನಗರ ಕಾರ್ಯದರ್ಶಿ ಮನೋಜ್ ವಂದಿಸಿದರು.