ಕಳೆದು ಹೋದ ಮೊಬೈಲ್ ಫೋನ್ ಲಭಿಸಿದ ಸಂತೋಷದಲ್ಲಿ ಭಾಸ್ಕರನಗರದ ಫಹ್ಮ ಆಯಿಷಾ
ಕುಂಬಳೆ: ಕಳೆದುಹೋಗಿದ್ದ ಮೊಬೈಲ್ ಲಭಿಸಿದ ಸಂತೋಷದಲ್ಲಿದ್ದಾಳೆ ಕುಂಬಳೆ ಭಾಸ್ಕರನಗರದ ಫಹ್ಮ ಆಯಿಷಾ. ಈಕೆ ಕುನಿಲ್ ಶಾಲೆಯ ಪ್ಲಸ್ಟು ವಿದ್ಯಾರ್ಥಿನಿಯಾಗಿದ್ದು, ಕಳೆದ ತಿಂಗಳ 26ರಂದು ಮಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡಿದ್ದಳು. ಈ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿದ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದ ಮಧ್ಯೆ ಈ ತಿಂಗಳ ೪ರಂದು ಫೋನ್ ಆನ್ ಆದ ಬಗ್ಗೆ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್ಐ ಮರುದಿ ಪಿ., ಕಾನ್ಸ್ಟೇಬಲ್ ಮಂಜುನಾಥ ಮೊಬೈಲ್ನ ಮೂಲವನ್ನು ಹುಡುಕಿ ಪತ್ತೆಹಚ್ಚಿದ್ದರು. ಆ ವೇಳೆ ಓರ್ವ ಇದು ತಾನು 4000 ರೂ. ನೀಡಿ ಖರೀದಿಸಿದ್ದೆಂದು ತಿಳಿಸಿದ್ದು, ಆದರೆ ಬಳಿಕದ ತನಿಖೆ ಯಿಂದ ಅದು ಸುಳ್ಳೆಂದು ತಿಳಿದು ಬಂದಿತ್ತು. ಈ ಹಿನ್ನೆಲೆ ಯಲ್ಲಿ ಆ ಮೊಬೈಲನ್ನು ಠಾಣೆಗೆ ತಲುಪಿಸಬೇಕೆಂದು ಪೊಲೀಸರು ಸೂಚಿಸಿದ್ದು, ಇಲ್ಲದಿದ್ದರೆ ಕೇಸು ದಾಖಲಿಸಿ ಮನೆಗೆ ಬಂದು ವಸೂಲು ಮಾಡುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಕೊರಿಯರ್ ಮೂಲಕ ಮೊಬೈಲ್ ಫೋನನ್ನು ಪಾಂಡೇಶ್ವರ ಠಾಣೆಗೆ ಕಳುಹಿಸಿಕೊಟ್ಟಿದ್ದು, ನಿನ್ನೆ ಎಸ್ಐ ಫಹ್ಮಳ ತಂದೆ ಮೊಹಮ್ಮದ್ ಅಜೀಜ್ರಿಗೆ ಕರೆ ಮಾಡಿ ಪಾಂಡೇಶ್ವರ ಠಾಣೆಗೆ ಬರಹೇಳಿದ್ದರು. ತಂದೆ ಹಾಗೂ ಪುತ್ರಿ ನಿನ್ನೆ ಠಾಣೆಗೆ ತೆರಳಿದಾಗ ಮೊಬೈಲ್ ಫೋನನ್ನು ಹಸ್ತಾಂತರಿಸಿದ್ದಾರೆ.