ಕಾನತ್ತೂರಿನಲ್ಲಿ ಕಾಡುಕೋಣ ಹಾವಳಿ :ವ್ಯಾಪಕ ಕೃಷಿ ನಾಶ
ಕಾನತ್ತೂರು: ಮುಳಿಯಾರು ಪಂಚಾಯತ್ಗೊಳಪಟ್ಟ ಕಾನತ್ತೂರು ಪಯೋಲದಲ್ಲಿ ಭಾರೀ ವ್ಯಾಪಕವಾಗಿ ಕಾಡುಕೋಣಗಳ ಹಾವಳಿ ತಲೆಯೆತ್ತಿದ್ದು, ಇದರಿಂದ ಕೃಷಿ ನಾಶ ನಷ್ಟ ಉಂಟಾಗಿದೆ. ಮುಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ. ಜನಾರ್ದನನ್, ಅವರ ನೆರೆಮನೆಯ ವಿನೋದ್ ಕುಮಾರ್ ಎಂಬವರ ಕೃಷಿ ತೋಟಗಳಿಗೆ ರಾತ್ರಿ ವೇಳೆ ಕಾಡುಕೋಣಗಳು ನುಗ್ಗಿ ಎರಡು ವರ್ಷ ಪ್ರಾಯದ ಅಡಿಕೆ ಸಸಿಗಳು, ಬಾಳೆ ಇತ್ಯಾದಿ ಕೃಷಿಗಳನ್ನು ನಾಶಗೊಳಿಸಿವೆ. ಇದರಿಂದ ಭಾರೀ ನಷ್ಟ ಉಂಟಾಗಿದೆ.
ದಿನಗಳ ಹಿಂದೆ ಕಾನತ್ತೂರಿನ ವೀಟಿಯಡ್ಕಕ್ಕೆ ಹಾಡಹಗಲೇ ಮನೆಯೊಂದರ ಗೇಟು ಮತ್ತು ಗೋಡೆಯನ್ನು ಕಾಡುಕೋಣಗಳು ಹಾನಿಗೆಡವಿದ್ದವು. ಇದೇ ಪಂಚಾಯತ್ಗೊಳಪಟ್ಟ ಪಯೋಲಂ ಮತ್ತು ತೈರೆ ಎಂಬೆಡೆಗಳಲ್ಲಿ ಕಾಡುಕೋಣಗಳ ಹಾವಳಿ ತಿಂಗಳುಗಳ ಹಿಂದೆಯೇ ತಲೆಯೆತ್ತಿವೆ. ಕಾಡುಕೋಣಗಳು ಗುಂಪು ಗುಂಪಾಗಿ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಮಾತ್ರವಲ್ಲದೆ ನೀರಾವರಿಗಾಗಿರುವ ಕೊಳವೆಗಳು ಹಾಗೂ ಇತರ ಸಾಮಗ್ರಿಗಳನ್ನು ನಾಶಗೊಳಿಸತೊಡಗಿವೆ ಎಂದು ಈ ಪ್ರದೇಶದವರು ಹೇಳಿದ್ದಾರೆ.