ಕಾನತ್ತೂರು ಬಳಿ ಮತ್ತೆ ಚಿರತೆ ಪತ್ತೆ

ಮುಳ್ಳೇರಿಯ: ಕೆಲವು ದಿನಗಳ ಬಿಡುವಿನ ಬಳಿಕ ಮುಳಿಯಾರು ಪಂಚಾಯತ್ ವ್ಯಾಪ್ತಿಯ ಬೀಟಿಯಡ್ಕದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಲ್ಲಿನ ಅಂಗನವಾಡಿ ಪರಿಸರದಲ್ಲಿ ಚಿರತೆ ಕಂಡಿರುವುದಾಗಿ ಸಜಿ ಎಂಬವರು ತಿಳಿಸಿದ್ದಾರೆ. ಇಂದು ಮುಂಜಾನೆ ೫.೪೫ರ ವೇಳೆ ರಬ್ಬರ್ ಟ್ಯಾಪಿಂಗ್‌ಗೆ ತೆರಳುತ್ತಿದ್ದ ಸಜಿಯವರಿಗೆ ಚಿರತೆ ಕಾಣಿಸಿದೆ.  ಕೂಡಲೇ ಅವರು ಸ್ಥಳೀಯರಿಗೆ  ವಿಷಯ ತಿಳಿಸಿದ್ದಾರೆ.

ಮುಳಿಯಾರು, ಕಾರಡ್ಕ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಯಸ್ವಿನಿ  ಹೊಳೆ ಬದಿಯ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ ಹಾವಳಿ ತೀವ್ರಗೊಂಡಿದೆ. ಕಾನತ್ತೂರು, ಬೀಟಿಯಡ್ಕ, ಮೂಡಯಂವೀಡ್, ನೆಯ್ಯಂಗಯ, ಕೊಟ್ಟಂಗುಳಿ, ಪಾಣೂರು ಎಂಬೀ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳು ನಾಪತ್ತೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿಬರುತ್ತಿದೆ. ಅದರ ಜೊತೆಗೆ ಪದೇ ಪದೇ ಚಿರತೆ ಪ್ರತ್ಯಕ್ಷಗೊಳ್ಳುತ್ತಿದೆ. ಏಕಕಾಲದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿರುವುದಾಗಿಯೂ ಹೇಳಲಾಗುತ್ತಿದೆ. ಇದರಿಂದ ಈ ಭಾಗದ ಜನತೆಯಲ್ಲಿ ಆತಂಕ ತೀವ್ರಗೊಂಡಿದೆ.

ಮುಳಿಯಾರು ಅರಣ್ಯದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೂಡು ಇರಿಸಿ ಸೆರೆಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದರೂ ಅದು ಯಶಸ್ವಿಯಾಗಿರಲಿಲ್ಲ.

Leave a Reply

Your email address will not be published. Required fields are marked *

You cannot copy content of this page