ಕೊಲೆ ಆರೋಪಿಯನ್ನು ಕೊಂದ ಪ್ರಕರಣ: ಬಂಧಿತ ಆರೋಪಿಯನ್ನು ಮತ್ತೆ ಕಸ್ಟಡಿಗೆ ಪಡೆಯಲು ಪೊಲೀಸರಿಂದ ಅರ್ಜಿ

ಕುಂಬಳೆ: ಕುಂಬಳೆಗೆ   ಮಾವಿನಕಟ್ಟೆಯ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮೂಲತಃ ಕುಂಬಳೆ ಶಾಂತಿಪಳ್ಳ ನಿವಾಸಿ ಹಾಗೂ ಕೊಲೆ ಪ್ರಕರಣವೊಂದರ ಆರೋಪಿಯೂ ಆಗಿರುವ ಅಬ್ದುಲ್ ರಶೀದ್ ಯಾನೇ ಸಮೂಸ ರಶೀದ್ (೩೮)ನನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಾಗುವುದೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಅದರಂತೆ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಿ ನಾಳೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨)ಕ್ಕೆ ಅರ್ಜಿ ಸಲ್ಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ ೧ರ ರಾತ್ರಿ ಅಬ್ದುಲ್ ರಶೀದ್‌ನನ್ನು ಕುಂಟಂಗೇರಡ್ಕ ಐಎಚ್‌ಆರ್‌ಡಿ ಕಾಲೇಜಿನ ಹಿಂಭಾಗದ ಮೈದಾನದಲ್ಲಿ ತಲೆಗೆ ಕಲ್ಲು ಹಾಕಿ ಕೊಲೆಗೈಯ್ಯಲಾಗಿತ್ತು. ಅದಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ, ಪೆರುವಾಡ್ ನಿವಾಸಿ ಅಭಿಲಾಷ್ ಅಲಿಯಾಸ್ ಹಬೀಬ್ (೩೨) ಎಂಬಾತನನ್ನು ಬಂಧಿಸಿ ಬಳಿಕ ಆತನನ್ನು  ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಆತನನ್ನು  ಹೆಚ್ಚಿನ ತನಿಖೆಗಾಗಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು.

You cannot copy contents of this page