ಪಾಕ್ ಭಯೋತ್ಪಾದಕರಿಂದ ಕೇರಳ ಸಹಿತ ದೇಶದಲ್ಲಿ ರೈಲು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್
ತಿರುವನಂತಪುರ: ಪಾಕಿಸ್ತಾನದ ಬೇಹುಗಾರಿಕಾ ವಿಭಾಗವಾದ ಐಎಸ್ಐ ತನ್ನ ಸಹ ಸಂಸ್ಥೆಗಳಾದ ಪಾಕಿಸ್ತಾನದ ಹಲವು ಭಯೋತ್ಪಾಕರ ಸಂಘಟನೆಗಳನ್ನು ಬಳಸಿ ಕೇರಳ ಸೇರಿ ದೇಶದಲ್ಲಿ ರೈಲು ಬುಡಮೇಲು ನಡೆಸುವ ಸ್ಕೆಚ್ಗೆ ರೂಪು ನೀಡಿದೆ ಎಂಬ ಕಳವಳಕಾರಿ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ಲಭಿಸಿದೆ. ಲಷ್ಕರ್-ಎ ತೊಬಾದಂತಹ ಭಯೋತ್ಪಾದಕ ಸಂಘಟನೆಗಳ ಮೂಲಕ ಐಎಸ್ಐ ಇಂತಹ ಸಂಚಿಗೆ ರೂಪು ನೀಡಿದೆ. ರೈಲು ಬುಡಮೇಲು ಕೃತ್ಯ ಮಾತ್ರವಲ್ಲ ವಿಧ್ವಂಸಕ ಕೃತ್ಯಗಳ ಸಂಚನ್ನೂ ಐಎಸ್ಐ ಹಾಕಿಕೊಂಡಿದೆ ಎಂದು ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ.
ಈ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಕೇರಳ ಸೇರಿದಂತೆ ರಾಜ್ಯದ ಇತರ ಎಲ್ಲಾ ರಾಜ್ಯಗಳ ಗುಪ್ತಚರ ವಿಭಾಗ ಹಾಗೂ ಅಲ್ಲಿನ ಸರಕಾರಗಳಿಗೆ ಜಾಗ್ರತಾ ನಿರ್ದೇಶ ನೀಡಿದೆ.
ಇದರಂತೆ ಕೇರಳದಾದ್ಯಂತ ಕಟ್ಟೆಚ್ಚರ ಪಾಲಿಸುವ ನಿರ್ದೇಶ ನೀಡಲಾಗಿದೆ. ರೈಲು ನಿಲ್ದಾಣಗಳು, ರೈಲ್ವೇ ಟ್ರಾಕ್ಗಳು, ರೈಲ್ವೇಗೆ ಸಂಬಂಧಿಸಿದ ಇತರ ಸಂಸ್ಥೆಗಳು ಹಾಗೂ ಜನದಟ್ಟಣೆಗೆ ಇರುವ ಕೇಂದ್ರಗಳಿಗೂ ಈ ಜಾಗ್ರತಾ ನಿರ್ದೇಶ ನೀಡಲಾಗಿದೆ. ಬಾಂಬು ಸ್ಕ್ವಾಡ್, ಬಾಂಬು ನಿಷ್ಕ್ರಿಯ ಪಡೆ ಹಾಗೂ ಶ್ವಾನದಳಗಳನ್ನು ಬಳಸಿ ಪದೇ ಪದೇ ತೀವ್ರ ತಪಾಸಣೆ ನಡೆಸುವಂತೆಯೂ ನಿರ್ದೇಶ ದಲ್ಲಿ ತಿಳಿಸಲಾಗಿದೆ. ಈ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ದೇಶದ ಎಲ್ಲೆಡೆಗಳಲ್ಲೂ ಕಟ್ಟೆಚ್ಚರ ಪಾಲಿಲಾಗುತ್ತಿದೆ.