ಪೆರಡಾಲ ಕ್ಷೇತ್ರ ರಸ್ತೆ ಅಭಿವೃದ್ಧಿಗೆ ಕ್ರಮ : ಶಾಸಕರ ನಿಧಿಯಿಂದ 45 ಲಕ್ಷ ರೂ. ಮಂಜೂರು
ಬದಿಯಡ್ಕ: ಬದಿಯಡ್ಕದಿಂದ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬದಿಯಡ್ಕ ಪಂಚಾಯತ್ 14ನೇ ವಾರ್ಡ್ (ಪಟ್ಟಾಜೆ) ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ತಿಳಿಸಿದ್ದಾರೆ. ಬದಿಯಡ್ಕ – ಪೆರಡಾಲ ರಸ್ತೆ ಅಭಿವೃದ್ದಿಗೆ ಸ್ಥಳೀಯಾಡಳಿತ ರಸ್ತೆ ಅಭಿವೃದ್ಧಿ ಯೋಜನೆ ಪ್ರಕಾರ ಶಾಸಕರ ನಿಧಿಯಿಂದ 45 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಈ ಯೋಜನೆಗೆ ಈಗಾಗಲೇ ತಾಂತ್ರಿಕ ಅನುಮತಿ ಲಭಿಸಿದೆ. ಟೆಂಡರ್ ಕ್ರಮ ಶೀಘ್ರ ನಡೆಯಲಿದೆಯೆಂದು ತಿಳಿಸಿದ್ದಾರೆ. ಚೆರ್ಕಳ – ಬದಿಯಡ್ಕ ರಸ್ತೆಯಿಂದ ಪೆರಡಾಲ ಕ್ಷೇತ್ರಕ್ಕೆ ಸಾಗುವ ಒಂದು ಕಿಲೋ ಮೀಟರ್ ರಸ್ತೆಯ ಡಾಮರೀಕರಣ ನಡೆಸಲಾಗುವುದು. ರಸ್ತೆಯ ಕೆಲವೆಡೆ ಕಾಂಕ್ರಿಟೀಕರಣ ಅಗತ್ಯವಿದ್ದು ಆ ಕಾಮಗಾರಿ ಶೀಘ್ರ ನಡೆಸಲಾಗುವುದು. ಡಾಮರೀಕರಣ ಮಳೆಗಾಲ ಬಳಿಕ ನಡೆಯಲಿದೆ. ಪೆರಡಾಲ ಕ್ಷೇತ್ರ ಬಳಿಯ ಸೇತುವೆಯ ದುರಸ್ತಿಯನ್ನೂ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಜನರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪಂಚಾಯತ್ ಆದ್ಯತೆ ನೀಡುತ್ತಾ ಬಂದಿದೆ. ಅದರ ಮುಂದುವರಿಕೆಯಾಗಿ ಬದಿಯಡ್ಕ – ಪೆರಡಾಲ ಕ್ಷೇತ್ರ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು ಮಾಡಿರುವುದಾಗಿ ಶ್ಯಾಮ್ ಪ್ರಸಾದ್ ಮಾನ್ಯ ತಿಳಿಸಿದ್ದಾರೆ. ರಸ್ತೆಯ ದುಸ್ಥಿತಿ ಬಗ್ಗೆ ‘ಕಾರವಲ್’ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.