ಪೈವಳಿಕೆ ಪಂ.ನಲ್ಲಿ ಉದ್ಯೋಗ ಖಾತರಿ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಒತ್ತಾಯ
ಪೈವಳಿಕೆ : ಪೈವಳಿಕೆ ಪಂಚಾಯತ್ನ ಉದ್ಯೋಗ ಖಾತರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೈವಳಿಕೆ ಮಂಡಲ ಕಾಂಗ್ರೆಸ್ ಆಗ್ರಹಿಸಿದೆ. ಪಂಚಾಯತ್ ಸದಸ್ಯರು ತಮಗೆ ಇಷ್ಟ ಬಂದ ರೀತಿಯಲ್ಲಿ ಕೆಲಸ ನಡೆಸುತ್ತಿದ್ದು ಯಾವುದೇ ಮಾನದಂಡ ಪಾಲಿಸುತ್ತಿಲ್ಲ. ಕೆಲವು ವಾರ್ಡಿನಲ್ಲಿ ಪಂಚಾಯತ್ ಸದಸ್ಯರ ಕೃಷಿ ಕೆಲಸಕ್ಕೆ ಉದ್ಯೋಗ ಖಾತರಿ ಯೋಜನೆಯನ್ನು ಬಳಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧಿಕಾರಿಗಳಲ್ಲಿ ಒತ್ತಾಯಿಸಿದೆ. ಸ್ವಜನ ಪಕ್ಷಪಾತ ನಡೆಸುತ್ತಿರುವ ಸದಸ್ಯರ ಬಗ್ಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು ಈ ಗೊಂದಲ ಪರಿಹರಿಸಲು ಅಧಿಕಾರಿಗಳು ತಯಾರಾಗಬೇಕೆಂದು ಕಾಂಗ್ರೆಸ್ ಪಕ್ಷದ ಪಂಚಾಯತ್ ಸಮಿತಿ ಜಿಲ್ಲಾಧಿಕಾರಿ ಹಾಗೂ ಬ್ಲೋಕ್ ಅಧಿಕಾರಿಗಳಲ್ಲಿ ಮನವಿ ಮಾಡಿದೆ. ಈ ರೀತಿಯಾಗಿ ಗ್ರಾಮಿಣ ಜನರ ಅಭಿವೃದ್ಧಿ ಕೆಲಸಗಳು ಸದಸ್ಯರ ಖಾಸಗಿ ಅಗತ್ಯಕ್ಕೆ ಬಳಸುವುದರ ವಿರುದ್ಧ ಜನಾಂದೋಲನ ನಡೆಸಿ ಪಂ.ನಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಲು ಪಕ್ಷವು ತೀರ್ಮಾನಿಸಿರುವುದಾಗಿ ಪಕ್ಷದ ಹೇಳಿಕೆಯಲ್ಲಿ ತಿಳಿಸಿದೆ.