ಪ್ರಧಾನಮಂತ್ರಿ ಕಚೇರಿ ಹೆಸರಲ್ಲಿ ಯುದ್ದವಾಹಿನಿ ಹಡಗಿನ ಲೊಕೇಶನ್ ಕೇಳಿದ ವ್ಯಕ್ತ್ತಿ ಸೆರೆ
ಕೊಚ್ಚಿ: ಭಾರತ-ಪಾಕಿಸ್ತಾನ ನಡುವೆ ಘರ್ಷಣೆ ನಡೆಯುತ್ತಿದ್ದ ವೇಳೆ ಪ್ರಧಾನ ಮಂತ್ರಿ ಕಚೇರಿಯ ಹೆಸರಲ್ಲಿ ಕೊಚ್ಚಿಯಲ್ಲಿರುವ ದಕ್ಷಿಣ ಭಾರತ ನೌಕಾಪಡೆ ಕಚೇರಿಗೆ ಫೋನಾಯಿಸಿ ಯುದ್ಧವಾಹಿನಿ ಹಡಗು ಆಗಿರುವ ಐಎನ್ಎಸ್ ವಿಕ್ರಾಂತ್ನ ಲೊಕೇಶನ್ ತಿಳಿಸುವಂತೆ ಹೇಳಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲಿಕೋಟೆ ವಡಕ್ಕಾವು ವಾಲತ್ತೂರು ನಿವಾಸಿ ಮುಜೀಬ್ ರೆಹ್ಮಾನ್ (34) ಬಂಧಿತ ವ್ಯಕ್ತಿ. ಈತ ತನ್ನ ಹೆಸರನ್ನು ಮರೆಮಾಚಿ ರಾಘವನ್ ಎಂಬ ಹೆಸರಲ್ಲಿ ಕೊಚ್ಚಿಯಲ್ಲಿರುವ ನೌಕಾ ಪಡೆಯ ಕಚೇರಿಗೆ ಫೋನ್ ಮಾಡಿದ್ದನು. ಇದರಿಂದ ಶಂಕೆಗೊಂಡು ನೌಕಾ ಪಡೆಯ ಅಧಿಕಾರಿ ತಕ್ಷಣ ಆಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶೋಧ ಆರಂಭಿಸಿದ ಪೊಲೀಸರು ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪ್ರಧಾನಮಂತ್ರಿಯ ಹೆಸರಲ್ಲಿ ಹಾಗೂ ನಿಜವಾದ ಹೆಸರನ್ನು ಬದಲಾಯಿಸಿ ಫೋನ್ ಮಾಡಿರುವುದರ ಹಿನ್ನೆಲೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ದ್ದಾರೆ. ಇದರ ಹಿಂದೆ ಯಾವುದಾದರೂ ಬಾಹ್ಯ ಅಥವಾ ವಿದೇಶಿ ಶಕ್ತಿಯ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಕೇಂದ್ರ ಗುಪ್ತಚರ ವಿಭಾಗ ಹಾಗೂ ಭಾರತೀಯ ಬೇಹುಗಾರಿಕಾ ವಿಭಾಗವಾದ ‘ರಾ’ ಕೂಡಾ ಈ ಬಗ್ಗೆ ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದೆ.