ಬೆಳ್ಳೂರಿನಲ್ಲಿ ನೆಟ್ಟಣಿಗೆ ರೈಸ್ ಮಾರುಕಟ್ಟೆಗೆ ಬಿಡುಗಡೆ
ಬೆಳ್ಳೂರು: ಪಂಚಾಯತ್ನ ಕೃಷಿಭವನದ ನೇತೃತ್ವದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳೆಸಿದ ಅಕ್ಕಿಯನ್ನು ನೇರವಾಗಿ ಗ್ರಾಹಕರಿಗೆ ದೊರಕಿಸಿಕೊಡುವ ಪ್ರಯತ್ನದಂಗವಾಗಿ ನೆಟ್ಟಣಿಗೆ ರೈಸ್ ಎಂಬ ಹೆಸರಲ್ಲಿ ಅಕ್ಕಿ ಬಿಡುಗಡೆಗೊಳಿಸಲಾಯಿತು. ಪಂ. ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದು, ಪದ್ಮಶ್ರೀ ಪುರಸ್ಕೃತ, ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅಕ್ಕಿ ಬ್ರಾಂಡ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವೆಂಕಪ್ಪಮಣಿ ಭಟ್ ಕಿನ್ನಿಂಗಾರು, ಜಯ ಬೆಳೇರಿ ಭಾಗವಹಿಸಿದರು.
ಕಾರಡ್ಕ ಬ್ಲೋಕ್ ಸಹಾಯಕ ಕೃಷಿ ನಿರ್ದೇಶಕಿ ಶೀನಾ ಕೆ.ವಿ. ಯೋಜನೆಯ ಬಗ್ಗೆ ವಿವರಿಸಿದರು. ಕಾರಡ್ಕ ಕೃಷಿಭವನದ ಅಧಿಕಾರಿ ಪಿ.ವಿ. ವಿನೀತ್ ತರಬೇತಿ ನೀಡಿದರು. ಮೌಲ್ಯಾಧಾರಿತ ಉತ್ಪನ್ನಗಳ ಮಾರುಕಟ್ಟೆ ಹಾಗೂ ಕೃಷಿಕರಿಗೆ ಲಾಭ ಉಂಟುಮಾಡುವ ನಿಟ್ಟಿನಲ್ಲಿ ಕೃಷಿಕರ ಒಕ್ಕೂಟ ರಚಿಸಲಾಯಿತು. ಚಂದ್ರಹಾಸ ರೈ, ಕಲ್ಲಗ ಚಂದ್ರಶೇಖರ ರಾವ್, ಅದ್ವೈತ್ ಎಂ.ವಿ, ಜನಪ್ರತಿನಿಧಿಗಳು, ಕೃಷಿ ಸಹಾಯಕರು, ಕೃಷಿಕರು ಭಾಗವಹಿಸಿದ್ದರು.