ಮದುವೆಯಾಗಿ ನಗ-ನಗದು ಪಡೆದು ಅಪ್ರತ್ಯಕ್ಷಗೊಳ್ಳುತ್ತಿರುವ ಬಹುಪತ್ನಿ ವಲ್ಲಭ ಸೆರೆ
ಕಾಸರಗೋಡು: ಮದುವೆಯಾಗಿ ನಗ-ನಗದು ಪಡೆದ ಬಳಿಕ ಅಪ್ರತ್ಯಕ್ಷಗೊಳ್ಳುತ್ತಿರುವ ಬಹುಪತ್ನೀ ವಲ್ಲಭನನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಕಣ್ಣಾಪುರಂ ಮುಳಪ್ಪಿಲಂಗಾಡ್ ಕಡಂಬೂರು ಮಮ್ಮುಕುನ್ನು ವಾಳೆಯಿಲ್ ಹೌಸ್ನ ವಿ.ಫಾಸಿಲ್ (51) ಬಂಧಿತ ಆರೋಪಿ. ನಕಲಿ ದಾಖಲುಪತ್ರ ಸೃಷ್ಟಿಸಿ ಚೆರುಕುನ್ನಿನ 54ರ ಹರೆಯದ ವಿಧವೆ ಮಹಿಳೆಯನ್ನು ಮದುವೆಯಾಗಿ ಆಕೆಯನ್ನು ಚೆರುಕುನ್ನಿನ ಅಪಾರ್ಟ್ಮೆಂಟ್ವೊಂದಕ್ಕೆ ಕರೆದೊಯ್ದು ಬಳಿಕ ಆಕೆಯ 23 ಪವನ್ ಚಿನ್ನದೊಡವೆ ಮತ್ತು ಆಸ್ತಿ ಮಾರಿ ಲಭಿಸಿದ್ದ 28 ಲಕ್ಷ ರೂ.ವನ್ನು ಆರೋಪಿ ಪಡೆದಿದ್ದನು. ಮಾತ್ರವಲ್ಲದೆ ಆ ಮಹಿಳಯ ಹೆಸರಲಿ ರುವ ಬ್ಯಾಂಕ್ ಸಾಲದ ಮೂಲಕ ಕಾರೊಂದನ್ನು ಖರೀದಿಸಿ ನಂತರ ಅಲ್ಲಿಂದ ಅಪ್ರತ್ಯಕ್ಷಗೊಂಡನೆಂದು ಆರೋಪಿಸಿ ಆ ಮಹಿಳೆ ಕಣ್ಣಾಪುರಂ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಅದಕ್ಕೆ ಸಂಬಂಧಿಸಿ ಚೆರ್ವತ್ತೂರಿನಿಂದ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಂಗದ ಬಂಧನದಲ್ಲಿರಿಸಲಾಗಿದೆ.
ಆರೋಪಿ ಕಳೆದ ೧೦ ವರ್ಷಗಳಿಂದ ಕಾಸರ ಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಹಲವು ಮಹಿಳೆಯರು ಮತ್ತು ಇತರ ಹಲವರನ್ನು ಮದುವೆಯಾಗಿ ಇದೇ ರೀತಿ ವಂಚಿಸಿದ್ದನು. ಅದಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರದ್ಧ ವಂಚನಾ ಪ್ರಕರಣ ದಾಖ ಲುಗೊಂಡಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.
ಇದರ ಹೊರತಾಗಿ ಕಾಸರಗೋಡು ತುರ್ತಿಯ ಸಕೀರ್ ಅಬ್ದುಲ್ಲ ಮೊಹಮ್ಮದ್ ಎಂಬವರಿಂದ ತರಕಾರಿ ವ್ಯಾಪಾರ ನಡೆಸುವ ಹೆಸರಲ್ಲಿ 16 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣವೂ ಇದೆ. ಅದಕ್ಕೆ ಸಂಬಂಧಿಸಿ 2018ರಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಚೀಮೇನಿಯ ಮಹಿಳೆ ಯೋರ್ವೆಯಿಂದ 12 ಲಕ್ಷ ರೂ., ಚಪ್ಪರಕಡವಿನ ಜಾಫರ್ ಮೊಹಮ್ಮದ್ ಎಂಬವರಿಂದ 32 ಲಕ್ಷ ರೂ., ಕೂತುಪರಂಬದ ಮುಸ್ತಫ ಎಂಬವರಿಂದ 24 ಲಕ್ಷ ರೂ. ಮತ್ತು ಚಿನ್ನವನ್ನು ಆರೋಪಿ ಪಡೆದು ವಂಚನೆಗೈದ ಬಗ್ಗೆಯೂ ದೂರುಗಳು ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಜೊತೆ ಸಭ್ಯ ರೀತಿಯಲ್ಲಿ ವರ್ತಿಸಿ ಅವರಿಗೆ ಮದುವೆ, ಬ್ಯಾಂಕ್ ಸಾಲ, ವ್ಯಾಪಾರದಲ್ಲಿ ಪಾಲುದಾರಿಕೆ ನೀಡಲಾಗುವುದೆಂಬ ಭರವಸೆ ನೀಡಿ ಅವರಿಂದ ನಗ-ನಗದು ಪಡೆದು ವಂಚಿಸಿದ ಹಲವು ಕೇಸುಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಾಖಲುಗೊಂಡಿ ದೆಯೆಂದೂ ಪೊಲೀಸರು ತಿಳಿಸಿದ್ದಾರೆ.