ಮಧೂರು ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆ ಕಾರ್ಯಕ್ರಮಗಳಿಗೆ ಸಿದ್ಧತೆ ಪೂರ್ಣ
ಕಾಸರಗೋಡು: ಕುಂಬಳೆ ಸೀಮೆಯ ಹಾಗೂ ಉತ್ತರ ಕೇರಳದ ಪ್ರಸಿದ್ಧ ದೇವಾಲಯವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಸಂಭ್ರಮ ಸಡಗರದಲ್ಲಿದೆ. ಮಾರ್ಚ್ ೨೭ರಿಂದ ಆರಂಭಗೊಂಡು ಎಪ್ರಿಲ್ ೭ರ ವರೆಗೆ ಜರಗುವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಯಾಗಿ ನೆರವೇರಲು ಸಕಲ ಸಿದ್ಧತೆಗಳು ಪೂರ್ಣಗೊಂಡಿ ರುವುದಾಗಿ ಸಂಬಂಧಪಟ್ಟವರು ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾ ಗೋಷ್ಠ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ೧೩ ವರ್ಷಗಳಿಂದ ದೇವ ಸ್ಥಾನದ ನವೀಕರಣ ಕಾಮಗಾರಿಗಳು ನಡೆಯುತ್ತಿದೆ. ಮಲಬಾರ್ ದೇವಸ್ವಂ ಮಂಡಳಿ ರೂಪೀಕರಿಸಿದ ನವೀಕರಣ ಸಮಿತಿಯು ಕ್ಷೇತ್ರದ ನವೀಕರಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಅಲ್ಲದೆ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸೀಮೆಯ ವಿವಿಧ ಭಾಗಗಳಿಂದ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ, ಪುತ್ತೂರು, ಸುಳ್ಯ ಮೊದಲಾದೆಡೆಗಳಿಂದ ಕರಸೇವಕರು ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮಗಳ ಯಶಸ್ವಿಗಾಗಿ ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ತಯಾರಿಸಲಾಗಿದೆ. ಕ್ಷೇತ್ರದ ನವೀಕರಣ ಕಾಮಗಾರಿಗಳಿಗೆ ಸುಮಾರು 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಪ್ರಧಾನ ದೇಗುಲದ ನವೀಕರಣ, ಉಪದೇವತೆಗಳ ಗುಡಿಗಳ ನವೀಕರಣ,ಶಿಲಾಮಯ ವೀರಭದ್ರನ ಗುಡಿ ನಿರ್ಮಾಣ, ಸುತ್ತು ಪೌಳಿಗಳ ದುರಸ್ತಿ, ಪೌಳಿಗಳ ನೆಲಕ್ಕೆ ಗ್ರಾನೈಟ್, ಒಳ ಅಂಗಣಕ್ಕೆ ಕಗ್ಗಲ್ಲಿನ ಚಪ್ಪಡಿ ಅಳವಡಿಸುವಿಕೆ, ಒಳ ಚರಂಡಿ ಕಾಮಗಾರಿ, ಗಣಪತಿ ದೇವರ ಮುಖಮಂಟಪ, ಶಿವದೇವರ ನಡೆ, ರಾಜಾಂಗಣ ನವೀಕರಣ, ನೈವೇದ್ಯ ಕೋಣೆಯ ಪುನರ್ ನಿರ್ಮಾಣ, ಅನ್ನಛತ್ರ, ಯಾತ್ರಿ ನಿವಾಸ, ಸೇವಾ ಕೌಂಟರ್, ಶಿಲಾಮಯ ಸುಂದರ ಮಹಾ ದ್ವಾರ, ಹೊರಾಂಗಣಕ್ಕೆ ಚಪ್ಪಡಿ, ಇಂಟರ್ಲಾಕ್ ಅಳವಡಿಕೆ, ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ಪ್ಲಾಂಟ್, ಪಶ್ಚಿಮ ಭಾಗದ ಕಾಂಪಾಂಡ್ ವಾಲ್, ಮೂಲ ಸ್ಥಾನದಲ್ಲಿ ಸವಾರಿ ಕಟ್ಟೆಯ ನವೀಕರಣ, ಪಂಜುರ್ಲಿ ಗುಡಿ, ಮದರು ಮಂಟಪ ನಿರ್ಮಾಣ ಸಹಿತ ಹಲವು ಕಾಮಗಾರಿಗಳನ್ನು ನವೀಕರಣ ಸಮಿತಿ ನಿರ್ವಹಿಸಿದೆ.
ಭಕ್ತರು ನವೀಕರಣಕ್ಕೆ ನೀಡಿದ ದೇಣಿಗೆ ಮಾತ್ರವಲ್ಲದೆ ಮಲಬಾರ್ ದೇವಸ್ವಂ ಮಂಡಳಿ, ಭಕ್ತಜನ ಸಮಿತಿ, ಸಿದ್ಧಿವಿನಾಯಕ ಸೇವಾ ಸಮಿತಿಗಳು ಕೂಡಾ ಸಹಾಯಧನ ನೀಡಿವೆ. ದಾನಿಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ಮಹಾಬಲೇಶ್ವರ ಭಟ್ ಎಡಕ್ಕಾನ, ಡಾ| ಬಿ.ಎಸ್. ರಾವ್, ಶಶಿಕಿರಣ್ ಶೆಟ್ಟಿ, ವಿಟ್ಲ ಈಶ್ವರ ಭಟ್, ಟಿ. ಶಾಮ್ ಭಟ್, ರವೀಂದ್ರ ಆಳ್ವ ಕೋಟೆಕುಂಜ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಬಿ.ಕೆ. ಮಧೂರು ಮೊದಲಾದವರು ಉದಾರವಾಗಿ ದೇಣಿಗೆ ನೀಡಿ ಸಹಕರಿಸಿದ್ದಾರೆಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ಯಲ್ಲಿ ಉತ್ಸವ ಸಮಿತಿ, ಉಪಸಮಿತಿ ಪದಾಧಿಕಾರಿ ಗಳಾದ ಕೆ. ನಾರಾಯ ಣಯ್ಯ, ಎಂ. ರಾಜೀವನ್ ನಂಬ್ಯಾರ್, ಕೆ. ಗಿರೀಶ್, ಡಿ.ಎಸ್. ಕಾರ್ತಿಕ್ರಾಜ್ ಮೊದಲಾದವರು ಭಾಗವಹಿಸಿದರು.
ವಿವಿಧೆಡೆ ಚಪ್ಪರ, ವೇದಿಕೆ ಸೌಕರ್ಯಗಳು
ಕ್ಷೇತ್ರದ ಈಶಾನ್ಯ ಭಾಗದಲ್ಲಿರುವ ಕೊಲ್ಯ ಬಯಲಿನ ಬಲಭಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಚಪ್ಪರಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎರಡು ವೇದಿಕೆಗಳು, ಪಾಕಶಾಲೆ, ಉಗ್ರಾಣ ವ್ಯವಸ್ಥೆ, ಅನ್ನಪ್ರಸಾದ ವಿತರಣೆಗೆ ಸೌಕರ್ಯ, ಕುಳಿತು ಊಟ ಮಾಡುವ ಮತ್ತು ಬಫೆಟ್ ವ್ಯವಸ್ಥೆಯ ಊಟದ ವ್ಯವಸ್ಥೆಗಳಿವೆ. ಕ್ಷೇತ್ರದ ತೆಂಕು ಭಾಗದ ಪದಾರ್ಥಿ ಬಯಲಿನಲ್ಲಿ ಒಂದು ವೇದಿಕೆ, ಊಟದ ಹಾಲ್, ಪಾಕಶಾಲೆ ವ್ಯವಸ್ಥೆಯಾಗಿದೆ. ಇಲ್ಲಿ ವಿಐಪಿಗಳಿಗೂ ಪ್ರಸಾದ ಭೋಜನ ವ್ಯವಸ್ಥೆಯಿರುವುದು. ಕ್ಷೇತ್ರದ ಪೂರ್ವ ಪ್ರವೇಶದ ಸಮೀಪ ಭಜನಾ ವೇದಿಕೆಯಿರುವುದು. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯಿರುವುದು. ೨೪ ಗಂಟೆಗಳ ಕಾಲ ಕ್ಯಾಂಟೀನ್ ಇರುವುದು. ನೀರಿನ ಪೂರೈಕೆಗಾಗಿ ಐದು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅಗತ್ಯವಿರುವ ಅತಿಥಿಗಳಿಗೆ ವಸತಿ ಸೌಕರ್ಯ ಮಾಡಲಾಗಿದೆ.
ವಿವಿಧೆಡೆ ವಾಹನ ಪಾರ್ಕಿಂಗ್
ಭಕ್ತರು ಬರುವ ವಾಹನಗಳ ನಿಲುಗಡೆಗೆ ಮಧೂರು ಬಯಲು, ಕೊಲ್ಯ ಬಯಲು, ಏರಿಕ್ಕಳ ಬಯಲು, ಚೇನಕ್ಕೋಡು ಬಯಲು ಎಂಬೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳ ವಾಹನಗಳಿಗೆ ಪಾಸ್ ನೀಡಲಾಗುವುದು. ಬಸ್ ಸೌಕರ್ಯ ಪರಕ್ಕಿಲ ತನಕ ಮಾತ್ರ ಇರುವುದು, ನಡೆದು ಬರಲು ಅಶಕ್ತರಾದವರಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸುವ ಪರಿಗಣನೆಯಲ್ಲಿದೆ. ಆರೋಗ್ಯ ಇಲಾಖೆ ಮತ್ತು ವಿವಿಧ ಆಸ್ಪತ್ರೆಗಳ ಸಹಕಾರದಿಂದ 24 ಗಂಟೆಗಳ ಕಾಲ ಆರೋಗ್ಯ ಸಂಬಂಧ ಸೇವೆ ಒದಗಿಸಲಾಗುವುದು.
ಮಧೂರು ಪಂಚಾಯತ್ ವ್ಯಾಪ್ತಿಯ ಹೊರೆಕಾಣಿಕೆ ನಾಳೆ
ಮಧೂರು ಪಂಚಾಯತ್ ವ್ಯಾಪ್ತಿಯ ಹೊರೆಕಾಣಿಕೆ ನಾಳೆ ಸಂಜೆ 3 ಗಂಟೆಗೆ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ. ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಹೊರೆಕಾಣಿಕೆ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ.