ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ : ಭರದಿಂದ ನಡೆಯುತ್ತಿರುವ ಸಿದ್ಧತೆ; ಮನೆಮನೆಗಳಿಗೆ ಆಮಂತ್ರಣ ಪತ್ರಿಕೆ ವಿತರಣೆ

ಮಧೂರು: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶ, ಮೂಡಪ್ಪ ಸೇವೆಗೆ ಇನ್ನು ಕೇವಲ 10 ದಿನಗಳಿದ್ದು, ಭರದ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯ ಉತ್ಸವವಾಗಿ ಬದಲಾಗುವ ಮಧೂರು ಬ್ರಹ್ಮಕಲಶೋತ್ಸವಕ್ಕೆ ವಿವಿಧ ಕಡೆಗಳಿಂದ ಈಗಾಗಲೇ ಕ್ಷೇತ್ರಕ್ಕೆ ಕಾರ್ಯಕರ್ತರು ತಲುಪುತ್ತಿದ್ದು, ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕ್ಷೇತ್ರ ಪರಿಸರ ಸ್ವಚ್ಛಗೊಳಿಸುವ, ಬ್ರಹ್ಮಕಲಶದ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಬೇಕಾದ  ಸ್ಥಳಾವಕಾಶವನ್ನು ಸಿದ್ಧಪಡಿಸುವ ಕೆಲಸಗಳು ಭರದಿಂದ ನಡೆಯುತ್ತಿದೆ. ಚಪ್ಪರ ಸಹಿತ ವಾಹನ ಪಾರ್ಕಿಂಗ್‌ಗಳಿಗೆ ಬೇಕಾದ ವ್ಯವಸ್ಥೆಗಳು ನಡೆಯುತ್ತಿವೆ. ದೇವಸ್ಥಾನದ ಪೈಂಟಿಂಗ್ ಕಾಮಗಾರಿಗಳು ಶ್ರಮದಾನದ ಮೂಲಕ ನಡೆಸಲಾಗಿದೆ. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯಗಳು ಮುಂದುವರಿಯುತ್ತಿದೆ. ಜಿಲ್ಲೆಯಲ್ಲೇ ಎತ್ತರದ ಧ್ವಜಸ್ತಂಭಗಳಿರುವ ಕ್ಷೇತ್ರಗಳಲ್ಲೊಂದಾದ ಇಲ್ಲಿ ಧ್ವಜಸ್ತಂಭಕ್ಕೆ ತಾಮ್ರದ ಲೇಪನ ಕಾರ್ಯ ನಡೆಸಲಾಗಿದೆ.

33 ವರ್ಷಗಳ ಬಳಿಕ ನಡೆಯುವ ಮೂಡಪ್ಪ ಸೇವೆಗಿರುವ ಬೆಳ್ತಿಗೆ ಅಕ್ಕಿಯನ್ನು ಶುಚೀಕರಿಸುವ ಕೆಲಸ ಈಗಾಗಲೇ ಆರಂಭಗೊಂಡಿದೆ. ಅಗತ್ಯವಿರುವ ಮರದ ಪೀಠಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಬುಟ್ಟಿ ಸಹಿತ ವಿವಿಧ ಸಲಕರಣೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಕಳೆದ 11 ವರ್ಷಗಳಿಂದ ಕ್ಷೇತ್ರದ ನಿರ್ಮಾಣ ಕಾರ್ಯ ನಡೆಸುತ್ತಾ ಬರಲಾಗುತ್ತಿತ್ತು. ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ ಅವರ ನೇತೃತ್ವದಲ್ಲಿ ಶಿಷ್ಯರಾದ ಪಿ.ಜಿ. ಜಗನ್ನಿವಾಸ್ ರಾವ್‌ರ ಮಾರ್ಗದರ್ಶನದಲ್ಲಿ ದೇಗುಲದ ನಿರ್ಮಾಣ ಕಾರ್ಯ ನಡೆಸಲಾಗಿದೆ. ದಾರುಶಿಲ್ಪಿ ಕಲ್ಲಮುಂಡ್ಕೂರು ನಾರಾಯಣ ಆಚಾರ್ಯ, ಹರೀಶ್, ಶಿಲಾಶಿಲ್ಪಿ ಬಸ್ತಿ ರಮೇಶ್, ತಾಮ್ರ ಶಿಲ್ಪಿ ಶಿವಪ್ರಸಾದ್ ಗೋವರ್ಧನ್ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

Leave a Reply

Your email address will not be published. Required fields are marked *

You cannot copy content of this page