ರಾತ್ರಿಪೂರ್ತಿ ಬಾವಿಯಲ್ಲೇ ಕಳೆದ ಯುವಕನ ರಕ್ಷಣೆ
ಕಾಸರಗೋಡು: ಆವರಣಗೋಡೆ ಇಲ್ಲದ ಬಾವಿಗೆ ಬಿದ್ದು ಪ್ರಾಣನ್ನು ಕೈಯಲ್ಲಿ ಹಿಡಿದು ರಾತ್ರಿ ಇಡೀ ಅದರಲ್ಲೇ ಕಳೆದ ಯುವಕನನ್ನು ಅಗ್ನಿಶಾಮಕದಳ, ಊರವರ ಸಹಾಯದಿಂದ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ನಡೆದಿದೆ. ಕರಿವೇಡಗಂ ಚುಳಿಪ್ಪಿಲೆ ತೋಟತ್ತಿಲ್ ಜಯನ್ ಥೋಮಸ್ (42) ಈ ರೀತಿ ಸಾವಿನ ದವಡೆಯಿಂದ ಪಾರಾದ ಯುವಕ. ಇವರು ಮೊನ್ನೆ ರಾತ್ರಿ ಮನೆಗೆ ನಡೆದುಬರುತ್ತಿದ್ದ ದಾರಿ ಮಧ್ಯೆ ಮನೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿರುವ ಕಟ್ಟೆ ಇಲ್ಲದ ಉಪಯೋಗಶೂನ್ಯ ಬಾವಿಗೆ ಬಿದ್ದಿದ್ದಾರೆ. ಈ ಬಾವಿಯೊಳಗೆ ಸುರಂಗವಿರುವುದರಿಂದಾಗಿ ಅದರ ನೀರು ಸುರಂಗದಿಂದ ಹೊರ ಹರಿಯುತ್ತಿರುವುದರಿಂದ ಬಾವಿಯಲ್ಲಿ ಹೆಚ್ಚು ನೀರಿರಲಿಲ್ಲ. ಆ ವೇಳೆ ಅವರು ಬೊಬ್ಬೆ ಹಾಕಿದರೂ ಅದು ಯಾರ ಗಮನಕ್ಕೆ ಬಂದಿರಲಿಲ್ಲ. ನಿನ್ನೆ ಬೆಳಿಗ್ಗೆ ಸಮೀಪ ನಿವಾಸಿಯಾದ ಯುವತಿಯೋರ್ವೆ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾವಿಯೊಳಗಿನಿಂದ ಶಬ್ದಕೇಳಿಸುವುದನ್ನು ಗಮನಿಸಿ ಬಾವಿಯೊಳಗೆ ನೋಡಿದಾಗ ಅದರಲ್ಲಿ ಜಯನ್ ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆಕೆ ನೀಡಿದ ಮಾಹಿತಿಯಂತೆ ಊರವರು ತಕ್ಷಣ ಆಗಮಿಸಿ ಕುತ್ತಿಕ್ಕೋಲು ಅಗ್ನಿಶಾಮಕದಳವನ್ನು ಕರೆಸಿ ಅವರ ಸಹಾಯದಿಂದ ಜಯನ್ರನ್ನು ಬಾವಿಯಿಂದ ಮೇಲಕ್ಕೆತ್ತಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು.