ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ: ಸಂದಿಗ್ಧತೆಯೊಂದಿಗೆ ಆತಂಕ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ಆತಂಕದ ಜೊತೆಗೆ ಸಂದಿಗ್ಧತೆಯನ್ನು ಹುಟ್ಟಿಸಿದೆ. ಈ ಹಿಂದೆ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದ್ದು, ಆ ವೇಳೆ ಟೋಲ್ ಬೂತ್ ನಿರ್ಮಿಸಕೂಡದೆಂಬ ಒತ್ತಾಯಿಸಿ ನಾಗರಿಕರ ನೇತೃತ್ವದ ಜನಪರ ಸಮಿತಿ ರಂಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಿದ್ದರು. ನಿನ್ನೆ ಬೆಳಿಗ್ಗೆ ಟೋಲ್ ಬೂತ್ ನಿರ್ಮಾಣ ಕೆಲಸ ಪುನರಾರಂಭಿಸಲು ಗುತ್ತಿಗೆದಾರರು ಪ್ರಯತ್ನಿಸಿದ್ದು, ಅದರ ಅಂಗವಾಗಿ ಪೊಲೀಸರು ಸ್ಥಳಕ್ಕೆ ತಲುಪಿ ಭದ್ರತೆ ಏರ್ಪಡಿಸಿದ್ದರು. ವಿಷಯ ತಿಳಿದ ನಾಗರಿಕರು ಟೋಲ್ ಬೂತ್ ನಿರ್ಮಾಣ ಸ್ಥಳಕ್ಕೆ ತಲುಪಿ ತಮ್ಮ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಜಿಲ್ಲಾಧಿಕಾರಿ ಲಿಖಿತವಾಗಿ ಭರವಸೆ ಕೊಟ್ಟರೆ ಮಾತ್ರವೇ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಇದರಿಂದ ಮುಷ್ಕರ ಸಮಿತಿ ಕೂಡಲೇ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದು, ಟೋಲ್ ಬೂತ್ ನಿರ್ಮಿಸಲು ಅನುಮತಿ ನೀಡಕೂಡದೆಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು, ಸಂಸದ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸೋಮವಾರ ಬೆಳಿಗ್ಗೆ ಈ ಕುರಿತಾಗಿ ಚರ್ಚೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆಂದು ತಿಳಿದು ಬಂದಿದೆ. ಚರ್ಚೆಯಲ್ಲಿ ಕೈಗೊಳ್ಳುವ ನಿರ್ಧಾರವನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.