ವಿದ್ಯಾರ್ಥಿಗಳು ಸಂಚರಿಸಿದ ಥಾರ್ ಜೀಪು ಅಪಘಾತ: ನಾಲ್ವರಿಗೆ ಗಾಯ
ಕುಂಬಳೆ: ವಿದ್ಯಾರ್ಥಿಗಳು ಸಂಚರಿಸಿದ ಥಾರ್ ಜೀಪು ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರ ವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಕುಂಬಳೆ- ಮುಳ್ಳೇರಿಯ ಕೆಎಸ್ ಟಿಪಿ ರಸ್ತೆಯ ನಾರಾಯಣಮಂ ಗಲದಲ್ಲಿ ಅಪಘಾತ ಸಂಭವಿಸಿದೆ.
ಉಪ್ಪಳ ಪತ್ವಾಡಿ ನಿವಾಸಿ ಸಾಹಿದ್, ಮುಳಿಯಡ್ಕ ನಿವಾಸಿ ಅಫ್ಲಾಲ್, ಬಂಬ್ರಾಣ ನಿವಾಸಿ ಕಾಶಿಫ್, ರುಮೈದ್ ಎಂಬಿವರು ಗಾಯಗೊಂಡಿದ್ದಾರೆ. ಈ ಪೈಕಿ ಸಾಹಿದ್ ಹಾಗೂ ರುಮೈದ್ನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಮತ್ತಿಬ್ಬರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶೇಣಿಯಲ್ಲಿ ನಡೆದ ಶಾಲಾ ಕಲೋತ್ಸವ ಮುಗಿದು ಮರಳುತ್ತಿದ್ದ ವಿದ್ಯಾರ್ಥಿಗಳು ಸಂಚರಿಸಿದ ಜೀಪು ಅಪಘಾತಕ್ಕೀಡಾಗಿದೆ. ಈ ವೇಳೆ ವಾಹನದಲ್ಲಿ ಆರು ಮಂದಿ ಇದ್ದರು. ಅಪಘಾತ ಸಂಭವಿಸಿದಾಕ್ಷಣ ಇಬ್ಬರು ಓಡಿ ಪರಾರಿಯಾಗಿದ್ದಾರೆ.
ಅಪಘಾತ ಕುರಿತು ಮಾಹಿತಿ ಲಭಿಸಿ ತಲುಪಿದ ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್,ಎಸ್.ಐ. ಕೆ. ಶ್ರೀಜೇಶ್ ಹಾಗೂ ನಾಗರಿಕರ ನೇತೃತ್ವದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ತಲುಪಿಸಲಾಯಿತು.