ಸಾಕು ನಾಯಿಯನ್ನು ಕಚ್ಚಿ ಕೊಂಡೊಯ್ದ ವನ್ಯಜೀವಿ: ಚಿರತೆ ಎಂಬ ಶಂಕೆ; ಜನರು ಭೀತಿಯಲ್ಲಿ

ಬೋವಿಕ್ಕಾನ: ಮನೆ ಅಂಗಳದಲ್ಲಿ ಕಟ್ಟಿ ಹಾಕಲಾಗಿದ್ದ ಸಾಕುನಾಯಿಯನ್ನು ವನ್ಯ ಜೀವಿ ಕಚ್ಚಿ ಕೊಂಡೊಯ್ದ ಘಟನೆ ಇರಿಯಣ್ಣಿ ಬಳಿಯ ಬೇಪುನಲ್ಲಿ ನಡೆದಿದೆ.

ಬೇಪು ತೋಣಿಪಳ್ಳದ   ನಾರಾಯ ಣನ್ ಎಂಬವರ ಸಾಕುನಾಯಿಯನ್ನು ವನ್ಯಜೀವಿ ಕಚ್ಚಿ ಸಾಗಿಸಿದೆ. ನಾಯಿಯನ್ನು  ಸಂಕೋಲೆಯಲ್ಲಿ ಮನೆ ಬಳಿ ಕಟ್ಟಿ ಹಾಕಲಾಗಿತ್ತು. ಆ  ಸಂಕೋಲೆಯನ್ನೇ  ಮುರಿದು ವನ್ಯಜೀವಿ ಅದನ್ನು ಕಚ್ಚಿ ಸಾಗಿಸಿದೆ.  ಈ ಮನೆಯಲ್ಲಿ ಇನ್ನೂ ಎರಡು ನಾಯಿಗಳಿದ್ದು, ಅವುಗಳನ್ನು ಗೂಡಿನೊಳಗೆ ಇರಿಸಲಾಗಿತ್ತು. ಆದ್ದರಿಂದ ಅವುಗಳು ವನ್ಯಜೀವಿಗಳ ದಾಳಿಯಿಂದ ಬಜಾವಾಗಿದೆ.

ಈ ಸಾಕುನಾಯಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಚಿರತೆ ಆಗಿರಬಹುದೆಂಬ ಶಂಕೆಯೂ ಉಂಟಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ರ‍್ಯಾಪಿಡ್ ರೆಸ್ಪೋನ್ಸ್ ಟೀಂ (ಆರ್‌ಆರ್‌ಟಿ) ಮತ್ತು ಅರಣ್ಯಾಧಿಕಾರಿ ಕೆ. ಜಯನ್‌ರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಆ ಪರಿಸರದಲ್ಲಿ ವ್ಯಾಪಕ ಶೋಧ ಆರಂಭಿಸಿದೆ. ಆ ಪರಿಸರದ ವನ್ಯಜೀವಿಗಳ ಕಾಲು ಗುರುತುಗಳನ್ನೂ ಪರಿಶೀಲಿಸಲಾಯಿತು. ಸುಮಾರು ೨೦ ಕಿಲೋ ತೂಕದ ಸಾಕುನಾಯಿಯನ್ನು ಕಚ್ಚಿ ಸಾಗಿಸಿರುವ ಹಿನ್ನೆಲೆಯಲ್ಲಿ ಅದು ದೊಡ್ಡ ಗಾತ್ರದ ಚಿರತೆಯಾಗಿರ ಬಹುದೆಂದು ಶಂಕಿಸಲಾಗುತ್ತಿದೆ. ಆದರೆ ಸಾಕು ನಾಯಿಯನ್ನು ಕಚ್ಚಿ ಸಾಗಿಸಿದ್ದು ಚಿರತೆ ಆಗಿದೆಯೇ ಎಂಬುವುದನ್ನು ಖಾತರಿಪಡಿಸಲು ಅರಣ್ಯ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ.

 ಈ ಪರಿಸರದಲ್ಲಿ  ಅರಣ್ಯ ಇಲಾಖೆಯವರು ಕ್ಯಾಮರಾಗಳನ್ನು ಸ್ಥಾಪಿಸಿದ್ದು, ಅದರಲ್ಲಿ ಯಾವುದೇ ದೃಶ್ಯಗಳು ಪತ್ತೆಯಾಗಿಲ್ಲ. ಮಂಜಿ ಕ್ಕಲ್, ಕಾಟಿಪಳ್ಳಂ, ಪೆರಿಯಡ್ಕ, ಕುಟ್ಟಿಯಡ್ಕ,ಕುಟ್ಯಾನಂ ಮೊದ ಲಾದೆಡೆಗಳಲ್ಲಿ  ಈ ಹಿಂದೆ   ಚಿರತೆಯನ್ನು ಕಂಡಿರುವುದಾಗಿ ಊರವರು ತಿಳಿಸಿದ್ದಾರೆ. ಆದರೆ ಅದು ಕೆಲವೊಮ್ಮೆ ಕಾಡು ಬೆಕ್ಕು ಆಗಿರಬಹುದೆಂಬ ಸಂಶಯವನ್ನು ಅರಣ್ಯ ಇಲಾಖೆಯವರು ವ್ಯಕ್ತಪಡಿಸಿದ್ದಾರೆ. ಚಿರತೆ ಶಂಕೆ ಕಾಟ ಜನರಲ್ಲಿ ಭೀತಿ ಆವರಿಸುವಂತೆಯೂ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page