ಸಾಲದ ಹೊರೆ ಸಹಿಸಲಾಗದೆ ರಾಜ್ಯದಲ್ಲಿ ಕೃಷಿಕ ಆತ್ಮಹತ್ಯೆ

ಆಲಪ್ಪುಳ: ಸಾಲದ ಹೊರೆಯನ್ನು ಸಹಿಸಲಾಗದೆ ರಾಜ್ಯದಲ್ಲಿ ಕೃಷಿಕನೋರ್ವ ಆತ್ಮಹತ್ಯೆ ಮಾಡಿಕೊಂಡ  ಅತೀ ದಾರುಣ ಘಟನೆ ನಡೆದಿದೆ. ಕುಟ್ಟನಾಡ್ ಬಳಿಯ ತಗಳಿ ನಿವಾಸಿಯೂ ಕಿಸಾನ್ ಸಂಘ ಜಿಲ್ಲಾ ಅಧ್ಯಕ್ಷರಾದ ಪ್ರಸಾದ್ ಎಂಬವರು ಆತ್ಮಹತ್ಯೆ ಮಾಡಿಕೊಂಡ  ವ್ಯಕ್ತಿಯಾಗಿದ್ದಾರೆ. ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಪ್ರಸಾದ್ ಕೃಷಿ ಅಗತ್ಯಗಳಿಗಾಗಿ ಸಾಲ ಪಡೆಯಲು ಬ್ಯಾಂಕ್‌ವೊಂದಕ್ಕೆ ಸಮೀಪಿಸಿದ್ದರೆನ್ನಲಾಗಿದೆ. ಆದರೆ ಪಿ.ಆರ್.ಎಸ್ ಸಾಲ ಪಾವತಿಸಲು ಬಾಕಿಯಿರುವುದರಿಂದ ಸಾಲ ಲಭಿಸದೆಂದು ಬ್ಯಾಂಕ್ ಅಧಿಕಾರಿಗಳು  ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಮನನೊಂದು ಪ್ರಸಾದ್ ಆತ್ಮಹತ್ಯೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ. ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿಗೆ ಫೋನ್ ಕರೆಮಾಡಿ ತನ್ನ ಸಮಸ್ಯೆಗಳನ್ನು ತಿಳಿಸಿದ ಬಳಿಕ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇದೇ ವೇಳೆ ಪೊಲೀಸರು ಪ್ರಸಾದ್‌ರ ಮನೆಯಲ್ಲಿ ನಡೆಸಿದ ಶೋಧ ವೇಳೆ ಆತ್ಮಹತ್ಯೆ ಬಗ್ಗೆ ಬರೆದ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಕೇರಳ ಸರಕಾರವೇ ತನ್ನ ಸಾವಿಗೆ ಕಾರಣವೆಂದು ದೂರಲಾಗಿದೆ ಎನ್ನಲಾಗುತ್ತಿದೆ.

ತಾನು ಬೆವರು ಸುರಿಸಿ ಬೆಳೆಸಿದ ಭತ್ತದ ಬೆಲೆಯನ್ನು ಪಿಆರ್‌ಎಸ್  ಸಾಲವಾಗಿ ನೀಡಲಾಗಿದೆ. ಈ ಸಾಲವನ್ನು ಅಸಲಿ ಸಹಿತ ಪಾವತಿಸಬೇಕಾದ ಹೊಣೆಗಾರಿಕೆ ಸರಕಾರದ್ದಾಗಿದೆ. ಆದರೆ ಸರಕಾರ ಆ ಬಗ್ಗೆ ಲೋಪವುಂಟು ಮಾಡಿರುವುದೇ ಬ್ಯಾಂಕ್‌ಗಳು ಹೊಸ ಸಾಲ ನೀಡದಿರಲು ಕಾರಣವೆಂದೂ ಇದರಿಂದ ಮನನೊಂದ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಸಾದ್ ಬರೆದಿಟ್ಟ ಪತ್ರದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page