ಮತಾಂತರಗೊಂಡ ಯುವತಿಯನ್ನು ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ಆದೇಶ: ಪತಿಯೊಂದಿಗೆ ತೆರಳಿದ ಯುವತಿ
ಕಾಸರಗೋಡು: ಮಂ ಜೇಶ್ವರದಿಂದ ನಾಪತ್ತೆಯಾಗಿ ಬೆಂಗಳೂರಿಗೆ ತಲುಪಿ ಅನ್ಯಮತೀ ಯನಾದ ಯುವಕನನ್ನು ವಿವಾಹವಾಗಿ ಹಿಂತಿರುಗಿ ಬಂದ ಇಷಾ ಅಲಿಯಾಸ್ ಆಯಿಶಾ ಸಾರಾಳನ್ನು ನ್ಯಾಯಾಲಯ ಸ್ವಂತ ಇಷ್ಟದಂತೆ ತೆರಳಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಯುವತಿ ಉಳ್ಳಾಲ ನಿವಾಸಿಯಾದ ಯುವಕನ ಜೊತೆ ತೆರಳಿದ್ದಾಳೆ. ಈ ತಿಂಗಳ ೭ರಂದು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಇಷಾ (24) ಕಾಣೆಯಾಗಿದ್ದಳು. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ಈಕೆಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಲಾಗಿದೆ. ಉಳ್ಳಾಲ ನಿವಾಸಿಯಾದ ಯುವಕನ ಜೊತೆ ಈಕೆ ಪತ್ತೆಯಾಗಿದ್ದಳು. ತಾನು ಎರಡು ವರ್ಷದ ಹಿಂದೆಯೇ ಮತಾಂತರಗೊಂಡು ಆಯಿಷಾ ಸಾರಾ ಎಂಬ ಹೆಸರು ಇರಿಸಿಕೊಂಡಿರುವುದಾಗಿ ಈಕೆ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ತನ್ನ ಸ್ವಂತ ಇಷ್ಟ ಪ್ರಕಾರ ಯುವಕನನ್ನು ವಿವಾಹವಾಗಿರುವುದಾಗಿಯೂ ಸ್ಪಷ್ಟಪಡಿಸಿದ್ದಾಳೆ.
ಇವರಿಬ್ಬರನ್ನು ಕಸ್ಟಡಿಗೆ ತೆಗೆದು ಮಂಜೇಶ್ವರಕ್ಕೆ ತಲುಪಿಸಿ ಹೇಳಿಕೆ ದಾಖಲಿಸಿದ ಬಳಿಕ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪರಿಸರದಲ್ಲಿ ಜನ ಸೇರಬಹುದೆಂಬ ನಿರೀಕ್ಷೆಯಿಂದ ಹೆಚ್ಚಿನ ನಿಗಾ ವಹಿಸಲಾಗಿತ್ತು. ಬಳಿಕ ಇಷಾ ಪತಿಯೊಂದಿಗೆ ತೆರಳಿದ್ದಾಳೆ. ಈಕೆ ಮೂಲತಃ ಆಂಧ್ರ ನಿವಾಸಿಯಾಗಿದ್ದು, ಕುಟುಂಬ ದವರಲ್ಲಿ ಕೆಲವರು ಇಸ್ಲಾಂ ಮತ ಸ್ವೀಕರಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.