ಸ್ಥಳೀಯಾಡಳಿತ ಸಂಸ್ಥೆಗಳ ಉಪಚುನಾವಣೆ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅವಲೋಕನ ಸಭೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳಲ್ಲಿ  ಜಿಲ್ಲೆಯಲ್ಲಿ ಉಪ ಚುನಾವಣೆ ಈ ತಿಂಗಳ ೩೦ರಂದು ನಡೆಯಲಿದ್ದು, ಈ ಬಗ್ಗೆ ಅವಲೋಕನ ನಡೆಸಲು ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರಗಿತು. ಉಪ ಚುನಾವಣೆ ನಡೆಯುವ ವಾರ್ಡ್‌ಗಳಲ್ಲಿ ಸರಿಯಾಗಿ ಮೇಲ್ನೋಟ ನಡೆಸಬೇಕೆಂದು ಚುನಾವಣೆಯಲ್ಲಿ ಲೋಪದೋಷಗಳಿಲ್ಲದೆ ಚಟುವಟಿಕೆ ನಡೆಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಕಾಸರಗೋಡು ನಗರಸಭೆಯ ಖಾಸಿಲೇನ್, ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಕೋಟೆಗುಡ್ಡೆ, ಕಲ್ಲಂಗೈ ವಾರ್ಡ್‌ಗಳಲ್ಲಿ ಹೊಸ ಮತದಾರರ ಯಾದಿ ಪ್ರಕಾರ ಉಪ ಚುನಾವಣೆ ನಡೆಯಲಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಭದ್ರತಾ ಕೊಠಡಿ ಸಿದ್ಧಪಡಿಸಲಾಗುವುದು. ಈ ತಿಂಗಳ ೨ರಿಂದಲೇ ಚುನಾವಣಾ ನೀತಿಸಂಹಿತೆ ಜ್ಯಾರಿಗೆ ಬಂದಿದೆ.  ಉಪ ಚುನಾವಣೆ ನಡೆಯುವ ಪಂಚಾಯತ್‌ನ ಸಂಪೂರ್ಣ ಪ್ರದೇಶ, ನಗರಸಭೆಯ ಆಯಾ ವಾರ್ಡ್‌ಗಳಲ್ಲಿ ಚುನಾವಣೆ ನೀತಿಸಂಹಿತೆ ಬಾಧಕವಾಗಿರುವುದು. ಅಂತಿಮ ಅಭ್ಯರ್ಥಿಗಳ ಯಾದಿ ಸಿದ್ಧಗೊಂಡಿದೆ. ಕಾಸರಗೋಡು ನಗರಸಭೆಯಲ್ಲಿ ಐದು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಕೋಟೆಗುಡ್ಡೆ ವಾರ್ಡ್‌ನಲ್ಲಿ ಆರು ಅಭ್ಯರ್ಥಿಗಳು, ಕಲ್ಲಂಗೈ ವಾರ್ಡ್‌ನಲ್ಲಿ ಎಂಟು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ನಡೆದ ಸಭೆಯಲ್ಲಿ ಚುನಾವಣಾ ಡೆಪ್ಯುಟಿ ಕಲೆಕ್ಟರ್ ಪಿ. ಅಖಿಲ್, ನಗರಸಭಾ ಚುನಾವಣಾ ಅಧಿಕಾರಿ ವಿ. ದಿನೇಶ್, ಮೊಗ್ರಾಲ್ ಪುತ್ತೂರು ಚುನಾವಣಾ ಅಧಿಕಾರಿ ಪಿಸಿಎ ಆರ್‌ಡಿ ಬ್ಯಾಂಕ್ ಜೋಯಿಂಟ್ ರಿಜಿಸ್ಟ್ರಾರ್ ಮೊಹಮ್ಮದ್ ಸಾಲಿ, ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್‌ಗಳು, ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page