ಬಾಯಾರು: ಮುಳಿಗದ್ದೆ-ಬೆರಿಪದವು ರಸ್ತೆಯ ಬದಿಯಾರ್ನಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾಕ್ಕೆ ಹಾನಿ ಉಂಟಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಸುಮಾರು 10.45ರವೇಳೆ ರಸ್ತೆ ಬದಿಯಲ್ಲಿರುವ ಬೃಹತ್ ಮರವೊಂದು ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಈ ವೇಳೆ ಮುಳಿಗದ್ದೆ ಭಾಗಕ್ಕೆ ತೆರಳುವ ಬಾಯಾರು ಪದವು ಆಟೋ ನಿಲ್ದಾಣದ ಆರೀಫ್ ಎಂಬವರ ಆಟೋರಿಕ್ಷಾಕ್ಕೆ ಹಾನಿ ಉಂಟಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ತಂತಿ ಚೆಲ್ಲಾಪಿಲ್ಲಿಗೊಂಡು ಸಂಚಾರಕ್ಕೆ ತಡೆ ಉಂಟಾಗಿದೆ. ಸ್ಥಳಕ್ಕೆ ವಿದ್ಯುತ್ ಇಲಾಖೆ ಸಿಬ್ಬಂದಿಗಳು, 8ನೇ ವಾರ್ಡ್ ಸದಸ್ಯ ರಾಮಕೃಷ್ಣ ಬಲ್ಲಾಳ್ ತಲುಪಿ ಊರವರ ಸಹಾಯದಿಂದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.






