ಅನಾಥ ಮೃತದೇಹದ ಅಂತ್ಯ ಸಂಸ್ಕಾರ: ಕೊಂಡೆವೂರು ಶ್ರೀಗಳಿಂದ ಸ್ಪಷ್ಟೀಕರಣ

ಉಪ್ಪಳ: ಹಿಂದೂ ಕಾರ್ಯಕರ್ತನ ಮೃತದೇಹವನ್ನು ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಸಂಸ್ಕರಿಸಲಾಯಿತೆಂಬ ವರದಿಗಳ ಹಿನ್ನೆಲೆಯಲ್ಲಿ ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಂಗಲ್ಪಾಡಿ ಸೇವಾ ಭಾರತಿ ಸ್ಪಷ್ಟೀಕರಣ ನೀಡಿದೆ. ನಿನ್ನೆ ಕೊಂಡೆವೂರು ಆಶ್ರಮದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ. ಮೃತ ನಾರಾಯಣರ ಮೃತದೇಹವನ್ನು ಸಂಸ್ಕರಿಸಲು ಶೇಖ್ ಜಾಯಿದ್ ವೃದ್ಧಾಶ್ರಮದ ಸಂಚಾಲಕ ಇಕ್ಬಾಲ್ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮದ ಕಡೆಯಿಂದ ಮಂಗಲ್ಪಾಡಿ ಸೇವಾ ಭಾರತಿಯ ಅಧ್ಯಕ್ಷ ರಘು ಚೆರುಗೋಳಿಯವರಿಗೆ ಜವಾಬ್ದಾರಿ ನೀಡಲಾಗಿತ್ತು.

ಇದರಂತೆ ಜೂನ್ ೨೬ರಂದು ಮಧ್ಯಾಹ್ನ ಮೃತದೇಹ ತಲುಪುವುದೆಂದು ತಿಳಿಸಿದಾಗ ರಘು ಅವರ ನೇತೃತ್ವದಲ್ಲಿ ಸೇವಾಭಾರತಿ ಕಾರ್ಯಕರ್ತರು ಚೆರುಗೋಳಿ ಸ್ಮಶಾನದಲ್ಲಿ ಚಿತೆ ವ್ಯವಸ್ಥೆ ಕೈಗೊಂಡಿದ್ದರು. ಆದರೆ ಮೃತದೇಹ ತಲುಪಲು ವಿಳಂಬವಾದ ಕಾರಣ ಉಳಿದ ಕಾರ್ಯಕರ್ತರು ತೆರಳಿದ್ದರು. ತಡವಾಗಿ ತಂದ ಮೃತದೇಹವನ್ನು ಹಿಂದೂ ಸಂಪ್ರದಾಯದಂತೆ ರಘು ಚಿತೆಗೇರಿಸಿ ಅಗ್ನಿಸ್ಪರ್ಷ ಮಾಡಿ ಅಂತ್ಯ ವಿಧಿವಿಧಾನ ನೆರವೇರಿಸಿದ್ದರು. ಇದರ ಖರ್ಚುವೆಚ್ಚಗಳನ್ನು ಸೇವಾಭಾರತಿ ವಹಿಸಿತ್ತು. ಈ ಸಂದರ್ಭ ಶೇಖ್ ಜಾಯಿದ್ ವೃದ್ಧಾಶ್ರಮಕ್ಕಾಗಲೀ, ಇತರ ಮುಸ್ಲಿಂ ಸಂಘಟನೆಗಳಿಗಾಗಲೀ, ಮತೀಯ ನಾಯಕರಿಗಾಗಲಿ ಯಾವುದೇ ಪಾತ್ರವಿಲ್ಲವೆಂದು ಸ್ವಾಮೀಜಿ ತಿಳಿಸಿದ್ದಾರೆ. ಆದರೆ ಎಲ್ಲೂ ಸೇವಾಭಾರತಿಯ ಪಾತ್ರವನ್ನು ಉಲ್ಲೇಖಿಸದೆ ಜನಪ್ರತಿನಿಧಿಯಾದ ಇರ್ಫಾನ ಮೃತದೇಹಕ್ಕೆ ಅಗ್ನಿಸ್ಪರ್ಷ ಮಾಡಿದರೆಂಬ ಸುದ್ದಿ ಪ್ರಚಾರ ಪಡೆದಿದ್ದು ಇದು ವಿಷಾದನೀಯ ವೆಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಇದೇ ವೇಳೆ ಜಿ.ಪಂ. ಸದಸ್ಯೆಯ ಕೆಲಸವನ್ನು ಸ್ವಾಮೀಜಿ ಪ್ರಶಂಸಿಸಿದ್ದಾರೆ.

ಅನಾಥರಾಗಿ ಅಂಗಡಿ ಜಗಲಿಯಲ್ಲಿ ರೋಗಪೀಡಿತರಾಗಿದ್ದ ನಾರಾಯಣರನ್ನು ಕರೆದೊಯ್ದು ತಿಂಗಳ ಕಾಲ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಜಿ.ಪಂ. ಸದಸ್ಯೆ ಇರ್ಫಾನ ಇಕ್ಬಾಲ್‌ರ ಸೇವೆಯನ್ನು ಸ್ವಾಮೀಜಿ ಶ್ಲಾಘಿಸಿದ್ದಾರೆ. ಸೇವಾಭಾರತಿ ಜಾತಿ-ಮತ-ಭೇದವಿಲ್ಲದೆ ನೂರಾರು ಅನಾಥ ಶವಗಳ ಸಂಸ್ಕಾರವನ್ನು ಈ ಮೊದಲು ಮಾಡಿದ್ದು, ನಿವೃತ್ತ ಬ್ಯಾಂಕ್ ಮೆನೇಜರ್, ಸೇವಾಭಾರತಿ ಅಧ್ಯಕ್ಷ ರಘು ಸಿ. ನೇತೃತ್ವ ನೀಡಿದ್ದರು. ಇವರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

RELATED NEWS

You cannot copy contents of this page