ಕಾಸರಗೋಡು: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣವನ್ನು ಬುಡಮೇಲುಗೊಳಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ, ಉದ್ಯೋಗ ಖಾತರಿ ಯೋಜನೆಯನ್ನು ಇಲ್ಲದಾಗಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟ್ರೇಟ್ಗೆ ನಿನ್ನೆ ನಡೆಸಿದ ಮಾರ್ಚ್ನಲ್ಲಿ ಸಂಘರ್ಷ ಸ್ಥಿತಿ ಸೃಷ್ಟಿಯಾಯಿತು. ಈ ವೇಳೆ ಪೊಲೀಸರು ಜಲಪಿರಂಗಿ ಪ್ರಯೋಗಿಸಿದರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ.
ಡಿಸಿಸಿ ಕಚೇರಿ ಪರಿಸರದಿಂದ ಆರಂಭಿಸಿದ ಮಾರ್ಚ್ನ್ನು ಕಲೆಕ್ಟ್ರೇಟ್ ಮುಂದೆ ಡಿಸಿಸಿ ಉಪಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಬಳಿಕ ಕಾರ್ಯಕರ್ತರು ಪೊಲೀಸರು ಸ್ಥಾಪಿಸಿದ ಬ್ಯಾರಿಕೇಡನ್ನು ದಾಟಲು ಪ್ರಯತ್ನಿಸಿದಾಗ ಸಂಘರ್ಷ ಸ್ಥಿತಿ ಸೃಷ್ಟಿಯಾಯಿತು. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್. ಕಾರ್ತಿಕೇಯನ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಉನೈಸ್ ಬೇಡಗಂ, ರಾಫಿ ಅಡೂರ್, ವಿನೋದ್, ಶ್ರೀನಾಥ್ ಬದಿಯಡ್ಕ, ಸುಜಿತ್ ತಚ್ಚಂಗಾಡ್, ಅಕ್ಷಯ ಎಸ್. ಬಾಲನ್, ರಜಿತ, ಆಬಿದ್ ಎಡಚ್ಚೇರಿ, ವಸಂತನ್ ಬಂದಡ್ಕ ಮೊದಲಾದವರು ನೇತೃತ್ವ ನೀಡಿದರು.







