ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಮಹಾ ಶಿವರಾತ್ರಿ ಮಹಾಪೂಜೆ ವೇಳೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತೆಯೋರ್ವಳ 5 ಪವನ್ ತೂಕದ ಚಿನ್ನದ ಸರ ನಾಪತ್ತೆಯಾದ ಘಟನೆ ನಡೆದಿದ್ದು, ಅಲ್ಪ ಹೊತ್ತಿನಲ್ಲೇ ಲಭಿಸಿದ ಮಹಿಳೆ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಲ್ಲಂಗೈ ನಿವಾಸಿಯಾದ ಐಶ್ವರ್ಯ ಶಿವರಾಮ ಶೆಟ್ಟಿ ಎಂಬ ವರು ನಿನ್ನೆ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ಕ್ಷೇತ್ರಕ್ಕೆ ಆಗಮಿಸಿ ದ್ದರು. ಈ ವೇಳೆ ಅವರ ಚಿನ್ನದ ಸರ ನಾಪತ್ತೆಯಾಗಿತ್ತು. ಕೂಡಲೇ ಅವರು ಕ್ಷೇತ್ರದ ಸಮಿತಿಯವರಲ್ಲಿ ತಿಳಿಸಿದ್ದು, ಅರ್ಚಕ ವಾಸುದೇವ ಹೊಳ್ಳ ಹಾಗೂ ಪದಾಧಿಕಾರಿಗಳು ಕ್ಷೇತ್ರ ಸನ್ನಿಧಿಯಲ್ಲಿ ಚಿನ್ನ ಲಭಿಸುವಂತೆ ಪ್ರಾರ್ಥಿಸಿದರು. ಅಲ್ಪ ಹೊತ್ತು ಕಳೆದಾಗ ಚಿನ್ನ ಬಿದ್ದು ಸಿಕ್ಕಿದ ಕೃಷ್ಣನಗರ ಮಹೇಂದ್ರ ಬೆಟ್ಟು ನಿವಾಸಿ ಹೇಮಾವತಿ ರಾಜೇಶ್ ಇದನ್ನು ತಂದು ಕ್ಷೇತ್ರಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಆ ಬಳಿಕ ಕುಂಬಳೆ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಕ್ಷೇತ್ರಕ್ಕೆ ಕರೆಸಿ ಚಿನ್ನದ ಸರವನ್ನು ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿರುವುದು ಭಕ್ತರಲ್ಲಿ ಸಂತಸ ಉಂಟುಮಾಡಿತು.







