ಉಪ್ಪಳ: ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಸ್ಕೂಟರ್ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಸವಾರ ಸಹಿತ ಮೂರು ಮಂದಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಮಜಿಬೈಲು ಜಂಕ್ಷನ್ನಲ್ಲಿ ನಡೆದಿದೆ. ಮಜಿಬೈಲು ನಿವಾಸಿಗಳಾದ ದಯಾನಂದ (37), ಕೃಷ್ಣ ಕುಮಾರ್ (29), ಸುಧಾಕರ (51) ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ದಯಾನಂದರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತಿಬ್ಬರು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕಾರು ಚಾಲಕನಾದ ಶಿರಂತಡ್ಕ ಚಿಪ್ಪಾರು ಅಮ್ಮೇರಿಯ ಶಹಾದ್ ಬಿ (40) ಎಂಬಾತನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡಿ ದ್ದಾರೆ. ರಾತ್ರಿ 9.30ರ ವೇಳೆ ಘಟನೆ ನಡೆದಿದೆ. ಸ್ಕೂಟರ್ ಸವಾರನಾದ ದಯಾನಂದ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಕೃಷ್ಣ ಕುಮಾರ್ ಹಾಗೂ ಸುಧಾಕರರೊಂದಿಗೆ ಮಾತನಾಡು ತ್ತಿದ್ದರು. ಈ ವೇಳೆ ಹೊಸಂಗಡಿ ಭಾಗದಿಂದ ಬಂದ ಸ್ವಿಫ್ಟ್ ಕಾರು ಈ ಮೂರು ಮಂದಿಗೆ ಢಿಕ್ಕಿ ಹೊಡೆದಿದೆ. ಕೂಡಲೇ ಮಂಜೇಶ್ವರ ಪೊಲೀಸರು ತಲುಪಿ ಕಾರು ಚಾಲಕ ಶಹಾದ್ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತಪಾಸಣೆ ನಡೆಸಿದಾಗ ಈತ ಮದ್ಯದಮಲಿನಲ್ಲಿದ್ದನೆಂದು ಪೊಲೀಸರು ತಿಳಿಸಿದ್ದಾರೆ.





