ಕುಂಬಳೆ: ಅತೀ ವಿಶಾಲವಾದ ಕಟ್ಟಡ ಕುಂಬಳೆ ಮೃಗಾಸ್ಪತ್ರೆಗೆ ಇದ್ದರೂ ಇದರಿಂದ ಯಾವುದೇ ಪ್ರಯೋಜನ ಕೃಷಿಕರಿಗೆ ಲಭಿಸುತ್ತಿಲ್ಲವೆಂದು ದೂರ ಲಾಗಿದೆ. ಇಲ್ಲಿ ಮೃಗಗಳಿಗೆ ಚುಚ್ಚುಮದ್ದು ಇಲ್ಲ. ಔಷಧಿ ಇಲ್ಲ. ಇದರಿಂದಾಗಿ ಕ್ಷೀರ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಹಲವಾರು ತಿಂಗಳಿಗಳಿಂದ ಇದೇ ಸ್ಥಿತಿ ಮುಂದುವರಿಯುತ್ತಿದ್ದರೂ ಈ ಬಗ್ಗೆ ಗಮನ ಹರಿಸಲು ಯಾರೂ ಮುಂದಾಗುತ್ತಿಲ್ಲವೆಂದು ಕ್ಷೀರ ಕೃಷಿಕರು ದೂರುತ್ತಾರೆ.ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಹಾಗೂ ದೊಡ್ಡ ಮಟ್ಟಿನ ನೂರಾರು ಮಂದಿ ಹೈನುಗಾರರು ಇದ್ದು, ಅಲ್ಲದೆ ಇತರ ಪ್ರಾಣಿ ಪ್ರೇಮಿಗಳು ಕೂಡಾ ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು ಬೆಳೆಸುತ್ತಿದ್ದಾರೆ. ಇವುಗಳಿಗೆ ಚುಚ್ಚುಮದ್ದು ನೀಡಲು, ರೋಗಕ್ಕೆ ಔಷಧಿಗಾಗಿ ಮೃಗಾಸ್ಪತ್ರೆಗೆ ತಲುಪಿದರೆ ಅಲ್ಲಿಂದ ಚೀಟಿ ಬರೆದು ಹೊರಗಿನ ಔಷಧಿ ಅಂಗಡಿಗಳಿಂದ ಔಷಧಿ ಖರೀದಿಸಲು ತಿಳಿಸುತ್ತಾರೆ ಎನ್ನಲಾಗಿದೆ. ಇದರಿಂದಾಗಿ ಕ್ಷೀರ ಕೃಷಿಕರಿಗೆ ಹೆಚ್ಚಿನ ಹೊರೆ ಉಂಟಾಗುತ್ತಿದೆ. ಮೃಗಾಸ್ಪತ್ರೆಗೆ ಬೆಳಿಗ್ಗೆ ೧೧ ಗಂಟೆಗೆ ಡಾಕ್ಟರ್ ಸಹಿತದ ನೌಕರರು ತಲುಪಿ ಸಂಜೆ ೩ ಗಂಟೆ ಆಗುವಾಗ ಹಿಂತಿರುಗುತ್ತಾರೆ. ಔಷಧವಿಲ್ಲದ ಕಾರಣ ಇವರಿಗೆ ಏನು ಮಾಡಲೂ ಸಾಧ್ಯವಾಗುತ್ತಿಲ್ಲವೆಂದು ಅವರು ತಿಳಿಸಿದ್ದಾರೆ.





