ಪೈವಳಿಕೆ: ಪೈವಳಿಕೆ ಪಂಚಾ ಯತ್ನ ಲಾಲ್ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಮ್ಮೇರಿ ತನಕ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಕಾಮಗಾರಿ ತಡೆದು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಮೂರೂವರೆ ಕಿಲೋ ಮೀಟರ್ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳಿಂದ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾ ಣಗೊಳ್ಳುತ್ತಿದೆ. ಈಗಾಗಲೇ ಸುಮಾರು ಒಂದು ಕಿಲೋ ಮೀಟರ್ ರಸ್ತೆಯನ್ನು ಕೆಲವು ದಿನಗಳ ಹಿಂದೆಯಷ್ಟೆ ಡಾಮರೀ ಕರಣಗೊಳಿಸಲಾಗಿದ್ದು, ಈಗಾಗಲೇ ಜಲ್ಲಿಕಲ್ಲು ಎದ್ದು ಹೋಗಲಾರಂಭಿಸಿರುವುದಾಗಿ ಆರೋಪಿಸಲಾಗಿದೆ. ಮಳೆ ಬಂದರೆ ಪೂರ್ತಿ ಜಲ್ಲಿಕಲ್ಲು ಎದ್ದು ಹೋಗಿ ಶೋಚನೀಯಾವಸ್ಥೆಗೆ ತಲುಪಲಿದೆ. ಅಲ್ಲದೆ ಚರಂಡಿ, ಸಂಕ ಕೂಡಾ ಅವ್ಯವಸ್ಥೆಯಿಂದ ನಿರ್ಮಿಸಲಾಗಿದ್ದು, ಮಳೆಗೆ ತಗ್ಗು ಪ್ರದೇಶದಲ್ಲಿರುವ ಹಲವಾರು ಮನೆಗಳು ನೀರಿಗೆ ಕೊಚ್ಚಿ ಹೋಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಈ ಕಳಪೆ ಮಟ್ಟದ ಕಾಮಗಾರಿಯ ಬಗ್ಗೆ ಗುತ್ತಿಗೆದಾರನಿಗೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಊರವರು ತಿಳಿಸಿದ್ದಾರೆ. ಸೋಮವಾರದಂದು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಅವರನ್ನು ಊರವರು ಒಟ್ಟು ಸೇರಿ ತರಾಟೆಗೆ ತೆಗೆದಿದಿದ್ದಾರೆ. ಹಲವು ವರ್ಷಗಳ ಕಾಲ ಈ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಈಗ ರಸ್ತೆ ಅಭಿವೃದ್ದಿಗೊಳ್ಳುವುದು ಊರವರಲ್ಲಿ ನೆಮ್ಮದಿಯನ್ನುಂಟು ಮಾಡುತ್ತಿರುವಾಗಲೇ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಮಳೆ ನೀರು ಹರಿಯಲು ವ್ಯವಸ್ಥಿತ ಚರಂಡಿ ಹಾಗೂ ಗುಣಮಟ್ಟದ ಡಾಮರೀಕರಣವನ್ನು ನಡೆಸಲು ಗುತ್ತಿಗೆದಾರ ಲೋಕೋಪಯೋಗಿ ಇಲಾಖೆ ತಯಾರಾಗದಿದ್ದಲ್ಲಿ ಊರವರು ಕಾಮಗಾರಿಯನ್ನು ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.






