ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದರ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿದ್ದಾರೆ.
ಇದರಂತೆ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಯ್ಗೆ ಹಾಗೂ ಸಾಗಾಟಕ್ಕೆ ಬಳಸಿದ ಟಿಪ್ಪರ್ ಲಾರಿಯನ್ನು ಕುಂಬಳೆ ಎಸ್ಐ ಅನಂತಕೃಷ್ಣನ್ ಆರ್ ಮೆನೋನ್ ವಶಪಡಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕನನ್ನು ಸೆರೆಹಿಡಿದಿದ್ದು, ವಾಹನದ ಮಾಲಕನ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಶಿರಿಯ ಹೊಳೆಯ ಪಾಚಾಣಿಯಿಂದ ಹೊಯ್ಗೆ ಸಂಗ್ರಹಿಸಿ ಸಾಗಿಸುತ್ತಿರುವ ಮಾಹಿತಿ ಲಭಿಸಿದ ಎಸ್ಐ ಅನಂತಕೃಷ್ಣನ್ ಮಫ್ತಿ ವೇಷದಲ್ಲಿ ಕಾರಿನಲ್ಲಿ ತಲುಪಿ ಶಿರಿಯ ವಳಯಂನಲ್ಲಿ ಲಾರಿಗೆ ತಡೆಯೊಡ್ಡಿದ್ದಾರೆ. ಟಿಪ್ಪರ್ ಲಾರಿಚಾಲಕ ಬಂದ್ಯೋಡು ಅಡ್ಕದ ಮನೋಜ್ ಕುಮಾರ್ (26)ನ್ನು ಈ ವೇಳೆ ಬಂಧಿಸಲಾಗಿದೆ.
ಲಾರಿ ಮಾಲಕ ವಳಯಂನ ಸಲೀಂ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಹೊಯ್ಗೆ ಸಾಗಾಟಕ್ಕೆ ಚಾಲಕನಿಗೆ ಒತ್ತಾಯಿಸಿದ ಆರೋಪದಂತೆ ಇವರ ವಿರುದ್ಧ ಕೇಸು ದಾಖಲಿಸಲಾಗಿದೆ. ಚಾಲಕನನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.





