ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಯಿತು: ಕಾಸರಗೋಡಿನಲ್ಲಿ ಸಂಚಾರ ತಡೆಗೆ ಪರಿಹಾರವಿಲ್ಲ

ಕಾಸರಗೋಡು: ಅಣಂಗೂರಿ ನಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ- ಚಂದ್ರಗಿರಿ ಟ್ರಾಫಿಕ್ ಜಂಕ್ಷನ್‌ವರೆಗೆ ವಾಹನ ಸಂಚಾರ ತಡೆ ತೀವ್ರಗೊಳ್ಳುತ್ತಿದೆ. ಇದು ಪ್ರಯಾಣಿಕರಿಗೆ ಸಂಕಷ್ಟ ತರುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬರುತ್ತಿದ್ದು, ಸಂಚಾರ ತಡೆ ಉಂಟಾಗುತ್ತಿದೆ. ಉತ್ಸವ, ಆಚರಣೆ, ವ್ಯಾಪಾರ ಸೀಸನ್ ಸಮಯಗಳಲ್ಲಿ ಸಂಚಾರತಡೆ ತಾರಕಕ್ಕೇರುತ್ತಿದೆ. ಈ ಮಧ್ಯೆ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಯಾವುದಾದರೂ ಸಂಘಟನೆಗಳು, ರಾಜಕೀಯ ಪಕ್ಷ ಜಾಥಾ ನಡೆಸಿದರೆ ಆ ದಾರಿಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ಇದು ಕಾಸರಗೋಡಿನ ಜನರು, ಪ್ರಯಾ ಣಿಕರು ಅನುಭವಿಸಲು ಆರಂಭಿಸಿ ಹಲವು ಕಾಲಗಳು ಕಳೆಯಿತು. ಪರಿಹಾರ ಇನ್ನೂ ಬಹಳ ದೂರ ವಿದೆ. ಇದಕ್ಕೆ ಪರಿಹಾರ ಕಾಣಬೇ ಕಾದವರು ಮುಖ ತಿರುಗಿಸಿ ನಿಂತಿ ದ್ದಾರೆಂದು ಆರೋಪಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೊಂದಿಗೆ ಸಂಚಾರ ತಡೆ ಈ ಮೊದಲು ಇಲ್ಲದಂತಹ ರೀತಿಯಲ್ಲಿ ನಗರದಲ್ಲಿ ಕಂಡುಬರುತ್ತಿದೆ. ತೀವ್ರಗೊಂಡ ಸಂಚಾರತಡೆಯನ್ನು ನಿಯಂತ್ರಿಸಲು ಹೊಸ ಬಸ್ ನಿಲ್ದಾಣದಿಂದ ಚಂದ್ರಗಿರಿ ಟ್ರಾಫಿಕ್ ಜಂಕ್ಷನ್ ವರೆಗೆ ಇನ್ನಷ್ಟು ಹೆಚ್ಚು ಪೊಲೀಸರನ್ನು ನೇಮಕಗೊಳಿಸ ಲಾಗಿದ್ದರೂ, ಸಂಚಾರತಡೆಗೆ ಯಾವುದೇ ಪರಿಹಾರ ಉಂಟಾಗಿಲ್ಲವೆಂದು ಪ್ರಯಾಣಿಕರು ತಿಳಿಸಿದ್ದಾರೆ. ಶಾಲೆ ಆರಂಭವಾಗುವುದರೊಂದಿಗೆ ಸಂಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂಬ ಆತಂಕ ಹೆತ್ತವರಲ್ಲಿದೆ.

ನಗರದಲ್ಲಿ ಉಂಟಾಗುತ್ತಿರುವ ಸಂಚಾರ ತಡೆ ಹಿನ್ನೆಲೆಯಲ್ಲಿ ಚೆರ್ಕಳ ಭಾಗದಿಂದ ಆಗಮಿಸುವ ಬಸ್‌ಗಳು ಹೊಸ ಬಸ್ ನಿಲ್ದಾಣದಲ್ಲಿ ಟ್ರಿಪ್ ಕೊನೆಗೊಳಿಸುತ್ತಿವೆ. ತಲಪಾಡಿ ಭಾಗದಿಂದ ಬರುವ ಬಸ್‌ಗಳು ಕೂಡಾ ಹೊಸ ಬಸ್ ನಿಲ್ದಾಣದಲ್ಲೇ ಟ್ರಿಪ್ ಕೊನೆಗೊಳಿಸುತ್ತಿವೆ. ಇದು ಪ್ರಯಾಣಿಕ ರಿಗೆ ಮತ್ತಷ್ಟು ಸಮಸ್ಯೆಗೆ ಕಾರಣ ವಾಗುತ್ತಿದೆ. ಮಂಗಳೂರಿಗೆ ತೆರಳುವ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಹೊಸ ಬಸ್ ನಿಲ್ದಾಣ ದಲ್ಲಿ ಕಂಡು ಬರುವ ಟ್ರಾಫಿಕ್ ಜಾಮ್‌ನಿಂದ ಪಾರಾಗಲು ಕರಂದಕ್ಕಾಡ್ ಮೂಲಕ ನೇರವಾಗಿ ಮಂಗಳೂರಿಗೆ ಸಂಚರಿಸುತ್ತಿವೆ. ಇದು ಕೂಡಾ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸಿದೆ.

You cannot copy contents of this page