ದೇಲಂಪಾಡಿ: ಪಂಜಿಕಲ್ ಬೆಳ್ಳಿಪ್ಪಾಡಿ ಪರಿಸರದಲ್ಲಿ ಆನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಕಳೆದ ಹಲವು ತಿಂಗಳಿಂದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಆನೆಗಳು ದಾಳಿ ನಡೆಸುತ್ತಿದ್ದು ಕಂಗು, ತೆಂಗು, ಬಾಳೆ ಕೃಷಿಗಳನ್ನು ನಾಶಪಡಿಸುತ್ತಿರುವುದಾಗಿ ದೂರಿದ್ದಾರೆ. ಮೊನ್ನೆ ರಾತ್ರಿ ಬೆಳ್ಳಿಪ್ಪಾಡಿ ವಿ.ಬಿ. ಶ್ರೀನಿಲಯ ಭಟ್ರ ತೋಟಕ್ಕೆ ಆನೆಗಳು ದಾಳಿಯಿಟ್ಟು ಕೃಷಿನಾಶಗೈದಿವೆ. ಈ ಪರಿಸರಕ್ಕೆ ಅರಣ್ಯಾಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿನ್ನೆ ಹಗಲು ಹೊತ್ತಲ್ಲಿ ಪರಪ್ಪ ಫಾರೆಸ್ಟ್ ಅಧಿಕಾರಿಗಳು ಬಂದು ನೋಡಿ ಹೋಗಿದ್ದು, ಆದರೆ ರಾತ್ರಿ ವೇಳೆಯಲ್ಲಿ ಆನೆಗಳು ದಾಳಿಯಿಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಸ್ಪಂದನೆ ಉಂಟಾಗಿಲ್ಲವೆಂದು ಸ್ಥಳೀಯ ಕೃಷಿಕರು ದೂರಿದ್ದಾರೆ.






