ಕಾಸರಗೋಡು: ಜನರ ಸಮಸ್ಯೆಗಳು, ಅಭಿವೃದ್ಧಿ ವಿಷಯಗಳ ಬಗ್ಗೆ ನೇರವಾಗಿ ತಿಳಿದು ಪರಿಹಾರ ಕಾಣುವುದಕ್ಕಾಗಿ ಶಾಸಕ ಕಲ್ಲಟ್ರ ಮಾಹಿನ್ ನಡೆಸುವ ಜನಸಂಪರ್ಕ ಕಾರ್ಯಕ್ರಮಕ್ಕೆ ಕಾರಡ್ಕ, ಬೆಳ್ಳೂರು ಪಂಚಾಯತ್ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಾಮಾನ್ಯರ ದೂರು ಸಹಿತ ಶಾಶಕರನ್ನು ಭೇಟಿಯಾದರು. ಪಂಚಾಯತ್ಗಳ ವಿವಿಧ ಸ್ಥಳಗಳಲ್ಲಿ ನಡೆಯುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ವೃದ್ಧರು, ಕೃಷಿಕರು, ಕಾರ್ಮಿಕರ ಸಹಿತ ಹಲವಾರು ಮಂದಿ ಭಾಗವಹಿಸಿದ್ದಾರೆ. ವೈಯಕ್ತಿಕ ದೂರಿನಿಂದ ಆರಂಭಿಸಿ ಸಾರ್ವಜನಿಕವಾದ ಅಭಿವೃದ್ಧಿ ಬೇಡಿಕೆ ಮೊದಲಾದ ವಿಷಯಗಳ ಬಗ್ಗೆ ಜನರು ಶಾಸಕರ ಗಮನಕ್ಕೆ ತಂದಿದ್ದಾರೆ. ರಸ್ತೆಗಳ ಶೋಚನೀಯಾವಸ್ಥೆ, ಕುಡಿಯುವ ನೀರು ಸಮಸ್ಯೆ, ಸಂಚಾರ ಸಮಸ್ಯೆ, ಬೀದಿ ದೀಪಗಳು, ಆರೋಗ್ಯ ಶಿಕ್ಷಣ ಇಲಾಖೆಗಳ ಸಮಸ್ಯೆಗಳು, ಭೂಮಿಯ ಹಕ್ಕುಪತ್ರ, ಕ್ಷೇಮ ಯೋಜನೆಗಳಿಗೆ ಸಂಬಂಧಿಸಿದ ದೂರುಗಳು ಶಾಸಕರಿಗೆ ಲಭಿಸಿದೆ. ಈ ಎಲ್ಲಾ ದೂರುಗಳಲ್ಲಿ ಪರಿಹಾರ ಕೈಗೊಳ್ಳುವ ಭರವಸೆ ಶಾಸಕರು ನೀಡಿದರು.
ಮುಖಂಡರಾದ ಇ.ಆರ್. ಮುಹಮ್ಮದ್ ಕುಂಞಿ, ಮುಹಮ್ಮದ್ ಪಟ್ಟಾಂಗ್, ಹಮೀದ್ ಮಂಞಂಪಾರೆ, ಹನೀಫ ಎ.ಪಿ, ಹಸೈನಾರ್ ನಾಟೆಕಲ್ಲು, ಗೋಪ ಕುಮಾರ್, ಪುರುಷೋತ್ತಮನ್, ಸಿ. ಇಬ್ರಾಹಿಂ ಹಾಜಿ, ವಿನೋದನ್ ನಂಬ್ಯಾರ್, ಬಲರಾಮನ್ ನಾಯರ್, ಇ.ಆರ್. ಹಮೀದ್, ಕಲ್ಲಗ ಚಂದ್ರಶೇಖರ್ ರಾವ್, ಶ್ರೀಪತಿ ಭಟ್ ಕಡಂಬಳಿತ್ತಾಯ, ಐತ್ತಪ್ಪ ರೈ ಸಹಿತ ಹಲವರು ಭಾಗವಹಿಸಿದರು.
ಇಂದು ಮಧ್ಯಾಹ್ನದವರೆಗೆ ಕುಂಬ್ಡಾಜೆ ಪಂಚಾಯತ್ನಲ್ಲಿ ಜನಸಂಪರ್ಕ ಕಾರ್ಯಕ್ರಮ ಜರಗಿದ್ದು, ಅಪರಾಹ್ನ ಬದಿಯಡ್ಕ ಪಂಚಾಯತ್ನಲ್ಲಿ ನಡೆಯಲಿದೆ.






