ತನ್ನ ಪೂರ್ಣ ಜೀವನವನ್ನೇ ದೇಶದ ಅಭಿವೃದ್ಧಿಗಾಗಿ ಮುಡಿಪಾಗಿರಿಸಿರುವ ಧೀಮಂತ ನೇತಾರ ಪ್ರಧಾನಿ ಮೋದಿ- ನಳಿನ್ ಕುಮಾರ್ ಕಟೀಲ್

ಕಾಸರಗೋಡು: ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬಳಿಕ  ಕನಿಷ್ಟ ಒಂದು ದಿನವಾ ದರೂ ರಜೆ ತೆಗೆಯದೇ ತನ್ನ ಇಡೀ ಜೀವನವನ್ನೇ ಪೂರ್ಣವಾಗಿ ದೇಶದ ಅಭಿವೃದ್ಧಿಗಾಗಿ ಮುಡಿಪಾಗಿರಿಸಿ ರುವ ಧೀಮಂತ ನೇತಾರನಾಗಿದ್ದಾರೆಂದು ಬಿಜೆಪಿಯ ಕೇರಳ  ಘಟಕದ ಸಹ ಪ್ರಭಾರಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಎನ್‌ಡಿಎ ಕಾಸರಗೋಡು ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ನಿನ್ನೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ ಕಟೀಲ್ ಮಾತನಾಡಿದರು. ಭಾರತ ಇಂದು ಇಡೀ ವಿಶ್ವದಲ್ಲೇ ಮೇರು ಸ್ಥಿತಿಗೇರಿದೆ. ಪ್ರಧಾನಿ ನೋದಿಯವರ ಕಠಿಣ ಪರಿಶ್ರಮದಿಂದಲೇ ಇದು ಸಾಧ್ಯವಾಗಿದೆ. ಆದರೆ ವಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ದೇಶದ ನಾಶವನ್ನು ಮಾತ್ರವೇ ಬಯಸುವ ಒಂದು ಒಕ್ಕೂಟವಾಗಿ ಮಾರ್ಪಟ್ಟಿದೆ ಎಂದು ಕಟೀಲ್ ಹೇಳಿದ್ದಾರೆ. ಬಿಜೆಪಿ ನೇತಾರ ಪಿ. ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಪಕ್ಷದ ಇತರ ನೇತಾರರಾದ ಸುಧಾಮ ಗೋಸಾಡ, ಎ.ಕೆ. ವಿಜಯನ್, ಸವಿತ ಟೀಚರ್ ಮಾತನಾಡಿದರು. ಎನ್. ಸತೀಶನ್ ಮನ್ನಿಪ್ಪಾಡಿಯವರನ್ನು ಅಧ್ಯಕ್ಷರನ್ನಾಗಿ ಹಾಗೂ ಸುರೇಶ್ ಕುಮಾರ್ ಶೆಟ್ಟಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿಸಿ ೫೦೧ ಮಂದಿ ಸದಸ್ಯರನ್ನೊಳಗೊಂಡ ಎನ್‌ಡಿಎಯ ಕಾಸರಗೋಡು ಕ್ಷೇತ್ರ ಸಮಿತಿಗೂ ಸಭೆಯಲ್ಲಿ ರೂಪು ನೀಡಲಾಯಿತು. ಪ್ರಮೀಳಾ ಮಜಾಲ್ ಸ್ವಾಗತಿಸಿ, ಹರೀಶ್ ನಾರಂಪಾಡಿ ಕೊನೆಗೆ ವಂದಿಸಿದರು.

You cannot copy contents of this page