ಶಿಸ್ತುಕ್ರಮವಿಲ್ಲ: ಇ.ಪಿ. ಜಯರಾಜನ್‌ರಿಗೆ ಕ್ಲೀನ್ ಚಿಟ್ ನೀಡಿದ ಸಿಪಿಎಂ

ತಿರುವನಂತಪುರ: ಬಿಜೆಪಿ ನೇತಾರ ಇ.ಪಿ. ಜಯರಾಜನ್ ಬಿಜೆಪಿಯ ರಾಷ್ಟ್ರೀಯ ನೇತಾರರೊಂದಿಗೆ ಚರ್ಚೆ ನಡೆಸಿದ್ದರೆಂಬ ರೀತಿಯ ಹೇಳಿಕೆಗಳು ಹೊರಬಂದು ಅದು ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿರುವ ವೇಳೆಯಲ್ಲೇ ಅದರಲ್ಲಿ ಯಾವುದೇ ರೀತಿಯ ಹುರುಳಿಲ್ಲವೆಂದು ಹೇಳಿ ಸಿಪಿಎಂ ರಾಜ್ಯ ಸಮಿತಿ ಇ.ಪಿ. ಜಯರಾಜನ್‌ರಿಗೆ ಕ್ಲೀನ್ ಚಿಟ್ ನೀಡಿದೆ. ಮಾತ್ರವಲ್ಲ ಎಡರಂಗದ ರಾಜ್ಯ ಸಂಚಾಲಕರನ್ನಾಗಿ ಅವರು ಮುಂದುವರಿಯಲಿದ್ದಾರೆಂದೂ ಸ್ಪಷ್ಟಪಡಿಸಿದೆ. ಆ ಮೂಲಕ ಈ ವಿವಾದಕ್ಕೆ ತೆರೆಬೀಳುವಂತೆಯೂ ಮಾಡಿ ಅದರಿಂದ ತಾತ್ಕಾಲಿಕವಾಗಿ ಕೈತೊಳೆದುಕೊಂಡಿದೆ.

ಬಿಜೆಪಿ ಕೇಂದ್ರ ನೇತಾರ ಪ್ರಕಾಶ್ ಜಾವ್ದೇಕರ್‌ರೊಂದಿಗೆ ಇ.ಪಿ. ಜಯರಾಜನ್ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸಿದ್ದರೆಂದು, ದಲ್ಲಾಳಿ ನಂದಕುಮಾರ್ ಮೊದಲು ಹೇಳಿಕೆ ನೀಡಿದ್ದರು. ಆ ಬಳಿಕ ಬಿಜೆಪಿ ನೇತಾರೆ ಶೋಭಾ ಸುರೇಂದ್ರನ್ ಹೇಳಿಕೆ ನೀಡಿ ಬಿಜೆಪಿ ಸೇರಲು ಇ.ಪಿ. ಜಯರಾಜನ್ ಅವರು ಪ್ರಕಾಶ್ ಜಾವ್ದೇಕರ್‌ರೊಂದಿಗೆ ಚರ್ಚೆ ನಡೆಸಿದ್ದರೆಂದು ಹೇಳಿದ್ದರು. ಲೋಕಸಭಾ ಚುನಾವಣೆ ವೇಳೆಯಲ್ಲೇ ಇಂತಹ ಹೇಳಿಕೆಗಳು ಹೊರ ಬಂದಿರುವುದು ಅದು ಸಿಪಿಎಂನ್ನು ತೀವ್ರಸಂಕಷ್ಟದಲ್ಲಿ ಸಿಲುಕುವಂತೆ ಮಾಡಿತ್ತು. ಆ ಬಗ್ಗೆ ನಿನ್ನೆ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಸೇರಿ  ಅದರ  ವಿಷಯವನ್ನು ಚರ್ಚಿಸಲಾಯಿತು.

ಇ.ಪಿ. ವಿರುದ್ಧ ಮಾಡಲಾಗಿರುವ ಆರೋಪಗಳೆಲ್ಲವೂ ನಿರಾಧಾರಿತವಾದು ದ್ದಾಗಿದೆ. ಅಂತಹ ಆರೋಪ ಹೊರಿಸಿ ಹೇಳಿಕೆ ನೀಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಇ.ಪಿ. ಜಯರಾಜನ್‌ರಿಗೆ ನಿರ್ದೇಶ ನೀಡ ಲಾಗಿದೆಯೆಂದು ಸೆಕ್ರೆಟರಿಯೇಟ್ ಸಭೆ ಬಳಿಕ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page