ಗಾಯಗೊಂಡು ಆಸ್ಪತ್ರೆಗೆ ತಲುಪಿದ ಬೈಕ್ ಕಳವು ಪ್ರಕರಣದ ಆರೋಪಿ ಸೆರೆ: ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ

ಕುಂಬಳೆ: ಹೋಟೆಲ್‌ನ ಮುಂಭಾಗದಿಂದ ಬೈಕ್ ಕಳವು ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣದ ರವಿ ಯಾನೆ ಡಬ್ಬಿ ರವಿ ಎಂಬಾತ ಬಂಧಿತ ಆರೋಪಿ.

ಕುಂಬಳೆ ಕಂಚಿಕಟ್ಟೆಯ ಅಜಿತ್ ಕುಮಾರ್‌ರ ಪಲ್ಸರ್ ಬೈಕ್ ಕಳವುಗೈದ ಪ್ರಕರಣದಲ್ಲಿ ಡಬ್ಬಿ ರವಿಯನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ 28ರಂದು ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣ  ಹಿಂಭಾಗದಲ್ಲಿರುವ ಹೋಟೆಲ್‌ವೊಂದರ ಬಳಿ ನಿಲ್ಲಿಸಿ ಆಹಾರ ಸೇವಿಸಲು ತೆರಳಿದ್ದರು. ಬಳಿಕ ಮರಳಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಬೈಕ್ ಕಳವು ನಡೆಸಿರುವುದು ರವಿಯಾಗಿದ್ದಾನೆಂದು ಸಿಸಿ ಟಿವಿ ದೃಶ್ಯಗಳಿಂದ ತಿಳಿದು ಬಂದಿತ್ತು. ಇದರಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ ಅಪಘಾತದಲ್ಲಿ ಗಾಯಗೊಂಡ ಡಬ್ಬಿ ರವಿಯನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಪೊಲೀಸರು ಆಸ್ಪತ್ರೆಯಲ್ಲಿ  ಕಾದು ನಿಂತಿದ್ದರು. ಈ ವೇಳೆ ಆರೋಪಿಯನ್ನು ಅಲ್ಲಿಂದ ಬಂಧಿಸಲಾಗಿದೆ. ಅನಂತರ ಆರೋಪಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಪೊಲೀಸರ ಕಾವಲಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ಬಳಿಕ ತನಿಖೆ ನಡೆಸಿ ಬೈಕ್ ಪತ್ತೆಹಚ್ಚಲು ಕ್ರಮ ಕೈಗೊಳ್ಳುವುದಾಗಿ ಎಸ್.ಪಿ ಅನಂತಕೃಷ್ಣನ್ ಆರ್. ಮೆನೋನ್ ತಿಳಿಸಿದ್ದಾರೆ.

You cannot copy contents of this page