ಎಕೆಎಂ ಅಶ್ರಫ್‌ಗೆ ಸಚಿವ ಸ್ಥಾನ ಸಾಧ್ಯತೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎgಡನೇ ಬಾರಿ ಗೆಲುವು ಸಾಧಿಸಿರುವ ಎಕೆಎಂ ಅಶ್ರಫ್‌ರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ. ಈ ವಿಷಯ ಮುಸ್ಲಿಂ ಲೀಗ್‌ನ ರಾಜ್ಯ ಸಮಿತಿ ಸಕ್ರಿಯವಾಗಿ ಪರಿಗಣಿಸುತ್ತಿದೆಯೆಂಬ ಮಾಹಿತಿಯೂ ಲಭಿಸಿದೆ.

ಒಂದನೇ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸಚಿವ ಸಂಪುಟದಲ್ಲಿ ಇ. ಚಂದ್ರಶೇಖರನ್ ಸಚಿವರಾದ ಬಳಿಕ ಕಳೆದ ಐದು ವರ್ಷದಲ್ಲಿ ಕಾಸರಗೋಡು  ಜಿಲ್ಲೆಗೆ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಅಂದು ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಇ. ಚಂದ್ರಶೇಖರನ್ 2016-2021ರ ಅವಧಿಯಲ್ಲಿ ರಾಜ್ಯ ಕಂದಾಯ ಮತ್ತು ವಸತಿ ನಿರ್ಮಾಣ ಖಾತೆ ಸಚಿವರಾಗಿದ್ದರು. ಬಳಿಕ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಡರಂಗ ಸರಕಾರ ಅಧಿಕಾರಕ್ಕೇರಿದ ವೇಳೆಯಲ್ಲೇ ಇ. ಚಂದ್ರಶೇಖರನ್  ಶಾಸಕರಾಗಿದ್ದು ಅವರಿಗೆ ಮತ್ತೆ ಸಚಿವ ಸ್ಥಾನ ಲಭಿಸಿರಲಿಲ್ಲ.  ಇದರಿಂದಾಗಿ ಕಳೆದ ಐದು ವರ್ಷದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಅದನ್ನು ಭರ್ತಿಗೊಳಿಸಲು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ಸಚಿವ ಸ್ಥಾನ ನೀಡಲು ಮುಸ್ಲಿಂ ಲೀಗ್ ಈಗ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 745 ಮತಗಳ ಅಂತರದಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಗೆದ್ದಿದ್ದ ಎಕೆಎಂ ಅಶ್ರಫ್ ಈಬಾರಿ 29,252 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅದನ್ನು ಮುಸ್ಲಿಂ ಲೀಗ್ ರಾಜ್ಯ ನೇತೃತ್ವ ಗಮನದಲ್ಲಿರಿಸಿ ಕೊಂಡು ಅಶ್ರಫ್‌ರಿಗೆ  ಸಚಿವ ಸ್ಥಾನ ನೀಡುವ ವಿಷಯವನ್ನು ಸಕ್ರಿಯವಾಗಿ ಪರಿಗಣಿಸುತ್ತಿದೆಯೆಂದು ತಿಳಿಯಲಾಗಿದೆ.

ಎಕೆಎಂ ಅಶ್ರಫ್‌ರಿಗೆ ಸಚಿವ ಸ್ಥಾನ ಲಭಿಸಿದಲ್ಲಿ  ಜಿಲ್ಲೆಯಲ್ಲಿ ಸಚಿವ ಸ್ಥಾನ ಲಭಿಸುವ ಮೂರನೇ ಮುಸ್ಲಿಂ ಲೀಗ್ ನೇತಾರರಾಗಲಿದ್ದಾರೆ. ಈ ಹಿಂದೆ ಮುಸ್ಲಿಂ ಲೀಗ್‌ನ ಸಿ.ಟಿ ಅಹಮ್ಮದಲಿ ಮತ್ತು ಚೆರ್ಕಳಂ ಅಬ್ದುಲ್ಲ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ವಿಧಾನಸಭೆಯನ್ನು ಈ ಹಿಂದೆ ಪ್ರತಿನಿಧೀಕರಿಸಿದ್ದ ಸಿ.ಟಿ. ಅಹಮ್ಮದಲಿ 1991-95ರಲ್ಲಿ ಕೆ. ಕರುಣಾಕರನ್ ನೇತೃತ್ವದ ಯುಡಿಎಫ್ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಖಾತೆ ಸಚಿವರಾಗಿದ್ದರು. ಅನಂತರ ಎ.ಕೆ. ಆಂಟನಿ ನೇತೃತ್ವದ ಸಚಿವ ಸಂಪುಟ ದಲ್ಲೂ ಅವರು ಲೋಕೋಪ ಯೋಗಿ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.   ಬಳಿಕ ಮಂಜೇ ಶ್ವರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧೀಕರಿಸಿದ್ದ ಚೆರ್ಕಳಂ ಅಬ್ದುಲ್ಲ 2001-2004 ರ ಅವಧಿಯಲ್ಲಿ ಎ.ಕೆ. ಆಂಟನಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಖಾತೆ ಸಚಿವರಾಗಿದ್ದರು. ಎ.ಕೆ.ಎಂ. ಅಶ್ರಫ್ ಸಚಿವರಾದಲ್ಲಿ ಜಿಲ್ಲೆಯಲ್ಲಿ ಸಚಿವಗಿರಿ ಲಭಿಸುವ ಮೂರನೇ ಮುಸ್ಲಿಂ ಲೀಗ್  ಪ್ರತಿನಿಧಿಯೆಂಬ ಹಿರಿಮೆ ಅವರಿಗೆ ಲಭಿಸಲಿದೆ.

You cannot copy contents of this page