ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೆ. ಸುರೇಂದ್ರನ್ರ ಚುನಾವಣಾ ಪ್ರಚಾರ ಬೋರ್ಡನ್ನು ಪಟಾಕಿ ಸಿಡಿಸಿ ನಾಶಗೊಳಿಸಿ ಬಳಿಕ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದಂತೆ ಕುಂಬಳೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನ ‘ವಲಿಯೇಟನ್’ ಎಂಬ ಖಾತೆದಾರನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಚುನಾವಣಾ ಪ್ರಚಾರ ಬೋರ್ಡ್ನಲ್ಲಿ ವ್ಯಕ್ತಿ ಹತ್ಯೆ ನಡೆಸುವ ರೀತಿಯ ವಾಕ್ಯಗಳನ್ನು ಬರೆದ ಬಳಿಕ ಸೋಮವಾರ ರಾತ್ರಿ 1 ಗಂಟೆ ಹಾಗೂ ಮಂಗಳವಾರ ಸಂಜೆ 6 ಗಂಟೆ ಮಧ್ಯೆಗಿನ ಸಮಯದಲ್ಲಿ ಪಟಾಕಿ ಸಿಡಿಸಿ ಪ್ರಚಾರ ಬೋರ್ಡ್ ನಾಶಗೊಳಿಸಿದ್ದು, ಆ ದೃಶ್ಯಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಚಾರ ಮಾಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಪ್ರಚೋದನೆ ಸೃಷ್ಟಿಸಿ ಗಲಭೆ ಉಂಟುಮಾಡಲು ಪ್ರಯತ್ನಿಸಿರುವುದಾಗಿಯೂ ಪ್ರಕರಣದಲ್ಲಿ ತಿಳಿಸಲಾಗಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಲು ಸೈಬರ್ ಪೊಲೀಸ್ನ ಸಹಾಯದೊಂದಿಗೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.






